ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಯೋಜನೆಗೆ ಪ್ರಶಸ್ತಿ
ಬೆಳ್ತಂಗಡಿ,ಆ.02: ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿನಿಯರು ಪ್ರಸ್ತುತ ಪಡಿಸಿದ ಪ್ರಾಜೆಕ್ಟ್ ಒಂದಕ್ಕೆ ಲಕ್ಷ ರೂ. ನಗದಿನೊಂದಿಗೆ ಪ್ರಶಸ್ತಿ ದೊರೆತಿದೆ.
ಡಿಎಸ್ಟಿ ಎಂಡ್ ಟೆಕ್ಕಾಸ್ ಇನ್ಸಟ್ಯೂಮೆಂಟ್ಸ್ ಐಎನ್ಸಿ ಸಂಸ್ಥೆ ಭಾರತದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಇಂಡಿಯನ್ ಇನ್ಸ್ಸ್ಪಿಟ್ಯೂಟ್ ಆಫ್ ಮೇನೆಜ್ಮೆಂಟ್ನಲ್ಲಿ ಇಂಡಿಯನ್ ಇನೋವೇಶನ್ ಚಾಲೆಂಜ್ ಡಿಸೈನ್ ಸ್ಪರ್ಧೆಯನ್ನು ಆಯೋಜಿಸಿತ್ತು. ಇದರಲ್ಲಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಸ್ತುತ ಪಡಿಸಿದ ಎಡ್ವಾನ್ಸ್ಡ್ ಇ ಬಿನ್ ಪ್ರಾಜೆಕ್ಟಿಗೆ ಬೆಸ್ಟ್ ವುಮೆನ್ಸ್ ಟೀಮ್, ಟೆಕ್ಕಾಸ್ ಇನ್ಸ್ ಟ್ಯೂಟ್ಮೆಂಟ್ ಇಂಡಿಯಾ ಎಸ್ಪರಿನ್ ಟೆಕ್ ಟಾಲೆಂಟ್ ಆವಾರ್ಡ್- 2016 ಹಾಗೂ ಒಂದು ಲಕ್ಷ ರೂ. ಬಹುಮಾನ ದೊರಕಿದೆ.
ತಂಡದಲ್ಲಿ ಚೈತ್ರಾ ಎಸ್., ಅಕ್ಷತಾ, ದಿವ್ಯಾ ನಾಯಕ್ ಮತ್ತು ಪಲ್ಲವಿ ಬಿ.ಜೆ. ಭಾಗವಹಿಸಿದ್ದರು. ಈ ತಂಡ ದೇಶದ 30 ತಂಡಗಳಲ್ಲಿ ಸ್ಥಾನ ಪಡೆದಿದೆ.
ಹಾಗೆಯೇ ಇಲ್ಲಿನ ವಿದ್ಯಾರ್ಥಿಗಳ ತಂಡ 'ರೈತ ಮಿತ್ರ' ಎಂಬ ಯೋಜನೆಯಿಂದಾಗಿ ದೇಶದ ಅಂತಿಮ 10 ತಂಡಗಳಲ್ಲಿ ಸ್ಥಾನ ಪಡೆದುಕೊಂಡಿದೆ. ತಂಡದ ವಿದ್ಯಾರ್ಥಿಗಳಾದ ಚ್ಯವನ್ ಫಡ್ಕೆ, ಅರವಿಂದ ಹಾರೆಬೈಲು, ಆದರ್ಶ ಎಚ್.ಡಿ. ಮತ್ತು ಅರುಣ್ ರಾಜ್ಗೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೇನೆಜ್ಮೆಂಟ್ನಲ್ಲಿ ಒಂದು ವರ್ಷದ ಇನಕ್ಯುಬೇಶನ್ಗೆ ಅರ್ಹತೆ ದೊರಕಿದೆ. ಈ ಎರಡೂ ತಂಡಗಳಿಗೆ ಪ್ರಾಚಾರ್ಯ ಕೆ. ಸುರೇಶ್ ಹಾಗೂ ಪ್ರೊ. ಮಹೇಶ್ ಡಿ.ಎಸ್. ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ್ದಾರೆ.