ಎಂಡೋ ಬಾಧಿತರಿಗೆ ಸೇನಾಪುರದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ : ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ
ಉಡುಪಿ, ಆ.3: ಜಿಲ್ಲೆಯಲ್ಲಿರುವ ಎಂಡೋಸಲ್ಫಾನ್ ಬಾಧಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಕುಂದಾಪುರ ತಾಲೂಕಿನ ನಾಡಾ ಗ್ರಾಪಂ ವ್ಯಾಪ್ತಿಯ ಸೇನಾಪುರದಲ್ಲಿ 5 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಗುರುವಾರ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಎಂಡೋ ಸಲ್ಫಾನ್ ಸಾಮಾನ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಎಂಡೋ ಬಾಧಿತರು ಚಿಕಿತ್ಸೆಗಾಗಿ ದೂರ ಪ್ರಯಾಣಿಸಲು ಹಾಗೂ ಅವರ ಜೊತೆಯಲ್ಲಿ ಸಹಾಯಕ್ಕಾಗಿ ಪ್ರಯಾಣಿಸುವ ಒಬ್ಬರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸಲು ಬಸ್ ಪಾಸ್ ನೀಡುವ ಕುರಿತಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಆ.10ರೊಳಗೆ ಅರ್ಜಿಗಳನ್ನು ಸ್ವೀಕರಿಸಿ ಕೆಎಸ್ಸಾರ್ಟಿಸಿ ಉಡುಪಿ ಡಿಪೋ ಅಧಿಕಾರಿಗಳಿಗೆ ನೀಡಿ, ಶೀಘ್ರದಲ್ಲಿ ಪಾಸ್ಗಳನ್ನು ವಿತರಿಸಲು ಅಭಿಯಾನ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಪದೇ ಪದೇ ಎಂಡೋ ಪೀಡಿತರನ್ನು ದಾಖಲೆಗಳ ಪರಿಶೀಲನೆಗೆ ಕರೆಯದಂತೆ ಪ್ರಿಯಾಂಕ ಅವರು ಡಿಹೆಚ್ಓ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಹಾಸಿಗೆ ಹಿಡಿದಿರುವ ಎಂಡೋ ಬಾಧಿತರಿಗಾಗಿ ಸಂಚಾರಿ ಫಿಸಿಯೋಥೆರಪಿ ಕ್ಲಿನಿಕ್ ಸೇವೆಯನ್ನು ಒದಗಿಸುವ ಕುರಿತಂತೆ ಅಗತ್ಯ ವಾಹನ ಮತ್ತು ಸಿಬ್ಬಂದಿ ನೇಮಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿಗೆ ಡಿಸಿ ತಿಳಿಸಿದರು. ಜಿಲ್ಲೆಯಲ್ಲಿ ಹಾಸಿಗೆ ಹಿಡಿದಿರುವ ಎಂಡೋ ಬಾಧಿತರಿಗಾಗಿ ಸಂಚಾರಿ ಫಿಸಿಯೋಥೆರಪಿ ಕ್ಲಿನಿಕ್ ಸೇವೆಯನ್ನು ಒದಗಿಸುವ ಕುರಿತಂತೆ ಅಗತ್ಯ ವಾಹನ ಮತ್ತು ಸಿಬ್ಬಂದಿ ನೇಮಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿಗೆ ಡಿಸಿ ತಿಳಿಸಿದರು. ಜಿಲ್ಲೆಯ ಎಲ್ಲಾ ವಿಧಾನಸಬಾ ಸದಸ್ಯರ ಅನುದಾನದಲ್ಲಿ 10 ಲಕ್ಷ ರೂ.ವನ್ನು ಅಂಗವಿಕಲರಿಗೆ ಮೀಸಲಿಡುವ ಕುರಿತಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಎಂಡೋ ಪೀಡಿತರನ್ನು ಗುರುತಿಸುವ ಮಾನದಂಡಗಳ ಬದಲಾವಣೆ ಮಾಡುವಂತೆ ಎಂಡೋ ಪೀಡಿತರ ಒಕ್ಕೂಟದ ಮನವಿಯ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಸಾಧ್ಯವಾದಲ್ಲಿ ಎಂಡೋ ಪೀಡಿತ ಗ್ರಾಮಗಳ ಪುನರ್ ಸಮೀಕ್ಷೆ ಮಾಡಿ. ಅರ್ಹರನ್ನು ಗುರುತಿಸಿ ಸೌಲಭ್ಯ ವಿತರಿಸುವಂತೆ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು.
ಜಿಲ್ಲೆಯಲ್ಲಿ ಹೊಸದಾಗಿ 8 ಮಂದಿ ಎಂಡೋ ಬಾಧಿತರನ್ನು ಗುರುತಿಸಲಾಗಿದ್ದು, ಅವರಿಗೆ ಅಗತ್ಯ ಸೌಲಭ್ಯ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. 26 ಮಂದಿಗೆ ವಾಟರ್ಬೆಡ್ಗಳನ್ನು ವಿತರಿಸಲಾಗಿದೆ. ಬೇಡಿಕೆಗೆ ಅನುಗುಣವಾಗಿ ಉಳಿದವರಿಗೂ ನೀಡಲಾಗುವುದು, ಹಿಂದಿನ ಸಮೀಕ್ಷೆಯಲ್ಲಿ ಬಿಟ್ಟುಹೋಗಿರುವ ಗ್ರಾಮಗಳ ಸಮೀಕ್ಷೆ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ರೋಹಿಣಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್ ಉಪಸ್ಥಿತರಿದ್ದರು.