×
Ad

ಅಧಿಕಾರಿಗಳ ವಿರುದ್ಧ ಅರೆಬೆತ್ತಲೆ ಹೋರಾಟ: ಗಿರಿಧರ್ ನಾಯ್ಕ

Update: 2017-08-07 18:19 IST

ಪುತ್ತೂರು, ಆ. 7: ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿರುವ 2,400 ಎಕ್ರೆಯಷ್ಟು ಡೀಸಿ ಮನ್ನಾ ಭೂಮಿಯನ್ನು ಶ್ರೀಮಂತರು ಅತಿಕ್ರಮಿಸಿಕೊಂಡಿದ್ದು, ಈ ಅತಿಕ್ರಮಣ ತೆರವುಗೊಳಿಸಿ ಅದನ್ನು ದಲಿತರಿಗೆ ನೀಡಬೇಕೆಂದು ನಾವು ಆಗ್ರಹಿಸುತ್ತಾ ಬಂದಿದ್ದರೂ ಸ್ಪಂಧನೆ ಸಿಗಲಿಲ್ಲದ ಹಿನ್ನಲೆಯಲ್ಲಿ ಸಂಘಟನೆ ವತಿಯಿಂದ ಹೋರಾಟ ಆರಂಭಿಸಿದ್ದು, ಲಿಖಿತ ಸ್ಪಂದನೆ ಸಿಗದಿದ್ದಲ್ಲಿ ಮುಂದೆ ಅಧಿಕಾರಿಗಳ ವಿರುದ್ಧ  ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತೇವೆ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕಾ ಎಚ್ಚರಿಸಿದರು.

ಡಿ.ಸಿ.ಮನ್ನಾ ಭೂಮಿಯ ಅತಿಕ್ರಮಣ ತೆರವುಗೊಳಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಡುವಂತೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸೋಮವಾರ ಉಪವಿಭಾಗಾಧಿಕಾರಿಗಳ ಕಚೇರಿ ಮುಂಬಾಗ ಆರಂಭಗೊಂಡ ಅಹೋರಾತ್ರಿ ಧರಣಿ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಶ್ರೀಮಂತರ ಪಾಲಾಗಿರುವ ಡಿ.ಸಿ. ಮನ್ನಾ ಭೂಮಿಯ ಅತಿಕ್ರಮಣ ತೆರವುಗೊಳಿಸಿ ದಲಿತರಿಗೆ ನೀಡುವ ಇಚ್ಚಾಶಕ್ತಿ ಅಧಿಕಾರಿಗಳಿಗಿಲ್ಲ.

ಶಾಸಕರೂ ಡಿ.ಸಿ. ಮನ್ನಾ ವಿಚಾರದಲ್ಲಿ ಮಾತನಾಡುತ್ತಿಲ್ಲ. ಸುಳ್ಯದ ಶಾಸಕರು ದಲಿತ ವರ್ಗಕ್ಕೆ ಸೇರಿದವರಾಗಿದ್ದರೂ ಡಿ.ಸಿ. ಮನ್ನಾ ಭೂಮಿಯ ವಿಚಾರದಲ್ಲಿ ಪ್ರಯತ್ನ ನಡೆಸುತ್ತಿಲ್ಲ ಎಂದು ಆರೋಪಿಸಿದ ಅವರು ಡಿ.ಸಿ. ಮನ್ನಾ ಭೂಮಿ ವಿಚಾರದಲ್ಲಿ ಸಭೆ ನಡೆಯುತ್ತಿದ್ದ ವೇಳೆ ಸಭೆ ಬಹಿಷ್ಕರಿಸಿ ಹೋದ ಜಿಲ್ಲಾಧಿಕಾರಿಯ ಅಗತ್ಯತೆ ಜಿಲ್ಲೆಗಿದೆಯೇ ಎಂದು ಪ್ರಶ್ನಿಸಿದರು. ಅವರನ್ನು ಜಿಲ್ಲೆಯಿಂದ ವರ್ಗಾವಣೆಗೊಳಿಸುವ ತನಕ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಪ್ರತಿಭಟನೆಗೆ ಚಾಲನೆ ನೀಡಿದ ದಲಿತ ಧಮನಿತರ ಹೋರಾಟ ಸಮಿತಿಯ ಮುಖಂಡ ರಘುವೀರ್ ಸೂಟರ್‌ಪೇಟೆ ಮಾತನಾಡಿ ದಲಿತರಿಗೆ ನೀಡಬೇಕಾದ ಡಿಸಿ ಮನ್ನಾ ಭೂಮಿಯನ್ನು ದಲಿತರ ಕೈಯಿಂದ ಕಸಿದುಕೊಳ್ಳಲಾಗಿದ್ದು, ಇದನ್ನು ದಲಿತ ಶಕ್ತಿಯಿಂದಲೇ ಮತ್ತೆ ಪಡೆಯುತ್ತೇವೆ. ಡಿಸಿ ಮನ್ನಾ ಭೂಮಿ ವಿಚಾರದಲ್ಲಿ ದಲಿತರದ್ದು ಸೈದ್ಧಾಂತಿಕ ಹೋರಾಟವಾಗಿದ್ದು, ಶಾಸಕರು ನಮ್ಮ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು ,ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತುಕೊಂಡು ದಲಿತರಿಗೆ ನ್ಯಾಯ ಒದಗಿಸಲು ಮುಂದಾಗಬೇಕು ಎಂದರು.

ಜೆಡಿಎಸ್ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಐ.ಸಿ.ಕೈಲಾಸ್ ಮಾತನಾಡಿ ಡಿಸಿ ಮನ್ನಾ ಭೂಮಿಯನ್ನು ಅರಣ್ಯಭೂಮಿಯಾಗಿ ಮೀಸಲಿಡುವ ಹುನ್ನಾರ ಅಧಿಕಾರಿಗಳಿಂದ ನಡೆಯುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಮಗಾರಿಗಳು ಶ್ರೀಮಂತ ವರ್ಗದ ಅನುಕೂಲಕ್ಕೆ ತಕ್ಕಂತೆ ನಡೆಯುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲನಿಗಳಲ್ಲಿ ಸ್ಮಶಾನಕ್ಕಾಗಿ ಕಾಯ್ದಿರಿಸಿದ ಭೂಮಿ ಖಾಸಗಿ ವ್ಯಕ್ತಿಗಳ ಪಾಲಾಗಿದೆ. ಪುತ್ತೂರಿನಲ್ಲಿ ಅಂಬೇಡ್ಕರ್ ಭವನಕ್ಕೆ 50 ಸೆಂಟ್ಸ್ ಜಾಗ ನೀಡಲು ಸಾಧ್ಯವಾಗಿಲ್ಲ ಎಂದು ದೂರಿದರು.

ಸಿಐಟಿಯು ಮುಖಂಡ ಶೇಖರ್ ಲಾಯಿಲ ಮಾತನಾಡಿ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವು ಮಾಡುವ, ಸರ್ಕಾರಿ ಭೂಮಿಯನ್ನು ಬಡವರಿಗೆ ಒದಗಿಸುವ ಅಧಿಕಾರಿಗಳಿಗೆ ಡಿಸಿ ಮನ್ನಾ ಭೂಮಿಯ ಅತಿಕ್ರಮಣ ತೆರವುಗೊಳಿಸಿ ದಲಿತರಿಗೆ ನೀಡಲು ಸಾಧ್ಯವಾಗುತ್ತಿಲ್ಲ ಅಧಿಕಾರಿಗಳು ದಲಿತ ವಿರೋಧಿಯಾಗಿ ವರ್ತಿಸಿದ ಕಾರಣದಿಂದಾಗಿಯೇ ಇಂದು ನಾವು ಪ್ರತಿಭಟನೆ ನಡೆಸಬೇಕಾಗಿ ಬಂದಿದೆ ಎಂದರು.

ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಬಾಲಚಂದ್ರ ಸೊರಕೆ, ಜಿಲ್ಲಾಧ್ಯಕ್ಷ ಲೋಹಿತ್ ಅಮ್ಚಿನಡ್ಕ, ಜಿಲ್ಲಾ ಉಪಾಧ್ಯಕ್ಷ ಚಂದ್ರ ಇದ್ಪಾಡಿ, ವೇದಿಕೆಯ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್ ಅದ್ದಿ, ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ತ್ಯಾಗರಾಜನಗರ, ದಲಿತ ಮುಖಂಡ ಸೇಸಪ್ಪ ನೆಕ್ಕಿಲು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News