ಹಲ್ಲೆ ಪ್ರಕರಣ: ಆರೋಪಿಯ ಸೆರೆ
Update: 2017-08-10 16:02 GMT
ಪುತ್ತೂರು, ಆ. 10: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪುತ್ತೂರು ನಗರ ಠಾಣಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ನಿವಾಸಿ ಕುಸುಮ ಎಂಬವರ ಮನೆಗೆ 2013ರ ಅಕ್ಟೋಬರ್ 23ರಂದು 7 ಜನರಿದ್ದ ತಂಡ ಅಕ್ರಮ ಪ್ರವೇಶಗೈದು ಹಲ್ಲೆ ನಡೆಸಿರುವುದಾಗಿ ಪುತ್ತೂರು ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪೈಕಿ ಲಲಿತಾ ಎಂಬವರು ಸುಮಾರು 4 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದರು. ನ್ಯಾಯಾಲಯವು ಅವರ ಪತ್ತೆಗಾಗಿ ವಾರಂಟ್ ಜಾರಿ ಮಾಡಿತ್ತು. ಗುರುವಾರ ಪುತ್ತೂರು ನಗರಠಾಣಾ ಸಿಬ್ಬಂದಿ ಪರಮೇಶ್ವರ ಹಾಗು ಜಯರಾಮ ಅವರು ಪುತ್ತೂರು ತಾಲೂಕಿನ ಆಲಂಗಾರು ಗ್ರಾಮದ ನಡುಗುಡ್ಡೆ ಎಂಬಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.