ಕಾನೂನು ರಚಿಸುವವರೇ ಮುರಿಯುತ್ತಿದ್ದಾರೆ: ಜಯಪ್ರಕಾಶ್ ಹೆಗ್ಡೆ
ಉಡುಪಿ, ಆ.11: ಕಾನೂನು ರಚನೆ ಮಾಡುವವರೇ ಇಂದು ಕಾನೂನು ಮುರಿಯುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಮನೋಭಾವವನ್ನು ಆಯಾ ಕ್ಷೇತ್ರದ ಮತದಾರರು ಮಾಡಿದರೆ ಮಾತ್ರ ಅವರಲ್ಲಿ ಸ್ವಲ್ಪವಾದರೂ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಆರ್ಟ್ ಕ್ಲಬ್ ಮತ್ತು ಸಮಾಜಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರ ಕಾಲೇಜಿನ ಗೀತಾಂಜಲಿ ಹಾಲ್ನಲ್ಲಿ ‘ಭಾರತದಲ್ಲಿ ಸಂಸತ್ತಿನ ಮೌಲ್ಯಗಳು ಕುಸಿಯುತ್ತಿವೆಯೇ’ ಎಂಬ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.
ಇಂದು ಸದನದಲ್ಲಿ ವಿಷಯಗಳ ಮೇಲೆ ಚರ್ಚೆ ನಡೆಯುವ ಬದಲು ನೇರ ಫೈಟ್ ನಡೆಯುತ್ತಿದೆ. ಅದು ನಡೆಯಬಾರದು. ಜನಪ್ರತಿನಿಧಿಗಳು ಮಾಡುವ ಕೆಲಸ ಶಾಶ್ವತವೇ ಹೊರತು ಎಷ್ಟು ಬಾರಿ ಗೆದ್ದಿದ್ದಾರೆಂಬುದು ಮುಖ್ಯ ಅಲ್ಲ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಎಲ್ಲಕ್ಕಿಂತ ನಮ್ಮ ಸಂವಿಧಾನವೇ ಶ್ರೇಷ್ಠ. ಅದನ್ನು ಬಿಟ್ಟು ನಾವು ಏನು ಮಾಡಲು ಆಗುವುದಿಲ್ಲ. ಕಾನೂನು ಮಾಡಿದವರೆ ಮುರಿಯುವುದು, ಕಾನೂನಿ ನಲ್ಲಿ ದೊಡ್ಡವರು ತಪ್ಪಿಸಿಕೊಂಡು ಸಣ್ಣವರು ಸಿಕ್ಕಿ ಬೀಳುವುದು ಮತ್ತು ಕಾನೂನೇ ಇಲ್ಲದಿದ್ದರೆ ಯಾವ ಸ್ಥಿತಿ ಉಂಟಾಗಬಹುದು ಎಂಬುದರ ಬಗ್ಗೆ ಪ್ರತಿಯೊಬ್ಬರು ಚಿಂತನೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳ ಬೇಕು. ವ್ಯವಸ್ಥೆಯ ಬದಲಾವಣೆಗಾಗಿ ಯುವ ಸಮುದಾಯ ಹೆಚ್ಚಿನ ಸಂಖ್ಯೆ ಯಲ್ಲಿ ರಾಜಕೀಯ ಪ್ರವೇಶಿಸಬೇಕು. ರಾಜಕೀಯ ಎಂಬುದು ವೃತ್ತಿ ಆಗ ಬಾರದು. ಇಂದು ಜನಸಾಮಾನ್ಯರು ಚುನಾವಣೆ ಎದುರಿಸುವುದು ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಕೆಲವು ರಾಜ್ಯಸಭಾ ಸದಸ್ಯರ ಹಾಜರಾತಿ ಶೇ.6ರಷ್ಟಿದ್ದರೂ ಸಂಸದರಿಗೆ ಸಿಗುವ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯುತ್ತಿರುತ್ತಾರೆ. ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವ ನಿಯಮ ಜಾರಿಗೆ ಬರಬೇಕೆಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿ ಸಿದ ಹೆಗ್ಡೆ, ಇದರಲ್ಲಿ ಸಭಾಪತಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಇದೆ ಎಂದು ಹೇಳಿದರು.
ಶಾಸಕರು, ಸಂಸದರಿಗೆ ಭದ್ರತೆ ಯಾಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಹೊರತು ಪಡಿಸಿ ಉಳಿದ ಯಾರಿಗೂ ಭದ್ರತೆ ನೀಡಬಾರದು ಎಂದು ತಿಳಿಸಿದ್ದೆ ಎಂದರು. ಸಂವಾದದಲ್ಲಿ ವಿದ್ಯಾರ್ಥಿಗಳಾದ ಸುಹಾನ್, ಜಸ್ಟಿನ್, ನೆಹಾ, ಶ್ರೇಯಸ್ ಕೋಟ್ಯಾನ್, ಆ್ಯಂಜೆಲಿನ್ ಡಿಸೋಜ, ಮೈಥ್ರೇಯಿ ಮೊದಲಾದವರು ಪಾಲ್ಗೊಂಡಿದ್ದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಪರಿಚಯ ಮಾಡಿದರು. ವಿದ್ಯಾರ್ಥಿಗಳಾದ ದಿವ್ಯಾ ಶೆಟ್ಟಿ ಸ್ವಾಗತಿಸಿದರು. ಸಚಿನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ತಿಕ್ ಪೈ ಕಾರ್ಯಕ್ರಮ ನಿರೂಪಿಸಿದರು.