×
Ad

ಅಕಾಡಮಿಗಳು ರಾಜಕಾರಣಿಗಳಿಗೆ ಆಶ್ರಯ ತಾಣವಾಗದಿರಲಿ: ಬಿ.ಎ.ಮೊಹಿದಿನ್

Update: 2017-08-12 19:12 IST

ಮಂಗಳೂರು, ಆ.12: ರಾಜ್ಯ ಸರಕಾರದ ಅಧೀನದಲ್ಲಿರುವ ಅಕಾಡಮಿಗಳು ಆಯಾ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯದ ಬೆಳವಣಿಗೆ, ಪೋಷಣೆಯ ಉದ್ದೇಶದಿಂದ ರಚಿತವಾಗಿದೆ. ಅದು ಎಂದೂ ಯಾವುದೇ ರಾಜಕಾರಣಿಗಳಿಗೆ ಆಶ್ರಯ ತಾಣವಾಗಬಾರದು ಎಂದು ಮಾಜಿ ಸಚಿವ ಬಿ.ಎ.ಮೊಹಿದಿನ್ ಅಭಿಪ್ರಾಯಪಟ್ಟರು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಹೊರ ತಂದ ಅಕಾಡಮಿಯ ಮೂರು ವರ್ಷಗಳ ಸಾಧನೆಗಳ ಮಾಹಿತಿಯುಳ್ಳ ‘ಹಕೀಕತ್’ ಹಾಗೂ ಇತರ ಐದು ಬ್ಯಾರಿ ಭಾಷೆಯ ಕೃತಿಗಳನ್ನು ನಗರದ ಹೊಟೇಲ್ ಶ್ರೀನಿವಾಸ್ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಕಾಡಮಿಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಸ್ಥಾಪಿಸಿಲ್ಲ. ಅದಕ್ಕೆ ಅದರದೇ ಆದ ಉದ್ದೇಶವಿದೆ, ಘನತೆ ಇದೆ. ಅದನ್ನು ಅನುಸರಿಸಿಕೊಂಡು ಹೋಗಬೇಕಿದೆ. ರಾಜಕೀಯ ಕಾರಣಕ್ಕಾಗಿ, ರಾಜಕಾರಣಿಗಳಿಗೆ ಸ್ಥಾನಮಾನ ಕಲ್ಪಿಸಲು ಅಕಾಡಮಿಗಳನ್ನು ದುರ್ಬಳಕೆ ಮಾಡಿಕೊಂಡರೆ ಸಾಹಿತ್ಯ, ಕಲೆ, ಭಾಷೆಯ ಬೆಳವಣಿಗೆ ಕ್ಷೀಣವಾಗಬಹುದು. ಹಾಗಾಗಿ ಅಕಾಡಮಿಗಳಿಗೆ ನೇಮಕ ಮಾಡುವಾಗ ಸಾಹಿತಿಗಳು, ಕಲಾವಿದರು, ಸಾಹಿತ್ಯಾಸಕ್ತರು, ಸಂಘಟಕರನ್ನು ಪರಿಗಣಿಸಬೇಕು ಎಂದು ಬಿ.ಎ.ಮೊಹಿದಿನ್ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ತನ್ನ ಮೂರುವರೆ ವರ್ಷದ ಅವಧಿಯಲ್ಲಿ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ರಚನೆ, ಬ್ಯಾರಿ ಸಾಹಿತ್ಯ ಭವನಕ್ಕೆ ಜಮೀನು ಖರೀದಿ, ಬ್ಯಾರಿ ಕ್ಯಾಲೆಂಡರ್ ರಚನೆ, ಬ್ಯಾರಿ ಫೆಲೋಶಿಪ್, ಬ್ಯಾರಿ ಸಾಕ್ಷಚಿತ್ರ, ಬ್ಯಾರಿ ಅಧ್ಯಯನ ಪೀಠಕ್ಕೆ ಪ್ರಯತ್ನ ಇತ್ಯಾದಿ ಸಾರ್ಥಕ ಸೇವೆ ಮಾಡಲು ಸಾಧ್ಯವಾಯಿತು ಎಂದರು.

ಮುಖ್ಯ ಅತಿಥಿಯಾಗಿ ಹಂಪಿ ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎ.ವಿ.ನಾವಡ, ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಕೆ.ಮುಹಮ್ಮದ್, ಕಾಟಿಪಳ್ಳ ಮಿಸ್‌ಬಾಹ್ ಮಹಿಳಾ ಕಾಲೇಜ್‌ನ ಅಧ್ಯಕ್ಷ ಬಿ.ಎಂ. ಮಮ್ತಾಝ್ ಅಲಿ, ಭಾರತೀಯ ಕೃಷಿಕ ಸಮಾಜದ ದ.ಕ. ಜಿಲ್ಲಾಧ್ಯಕ್ಷ ಹೈದರ್ ಪರ್ತಿಪಾಡಿ, ದುಬೈ ಬ್ಯಾರೀಸ್ ಕಲ್ಚರಲ್ ಫೋರಂನ ಪ್ರಧಾನ ಕಾರ್ಯದರ್ಶಿ ಡಾ. ಮುಹಮ್ಮದ್ ಕಾಪು, ತುಳು ಸಾಹಿತ್ಯ ಅಕಾಡಮಿಯ ನಿಯೋಜಿತ ಅಧ್ಯಕ್ಷ ಎ.ಸಿ.ಭಂಡಾರಿ, ಉಳ್ಳಾಲ ಹಝ್ರತ್ ಬನಾತ್ ವಿಮೆನ್ಸ್ ಕಾಲೇಜ್‌ನ ಪ್ರಾಂಶುಪಾಲೆ ಝಾಹಿದಾ ಜಲೀಲ್ ಭಾಗವಹಿಸಿ ಶುಭ ಹಾರೈಸಿದರು. ಅಕಾಡಮಿಯ ಸದಸ್ಯರಾದ ಆಯಿಶಾ ಪೆರ್ಲ, ಇದಿನಬ್ಬ ಬ್ಯಾರಿ ಉಪಸ್ಥಿತರಿದ್ದರು.

ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ.ಮುಹಮ್ಮದಾಲಿ ‘ಹಕೀಕತ್’ ಅವಲೋಕನ ಮಾಡಿದರು. ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಸದಸ್ಯರಾದ ಯೂಸುಫ್ ವಕ್ತಾರ್ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

►ಕಾರ್ಯಕ್ರಮದಲ್ಲಿ ಅಕಾಡಮಿಯ ಮೂರು ವರ್ಷದ ಸಾಧನೆಯ ‘ಹಕೀಕತ್’, ವಿವಿಧ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳಿಂದ ಬ್ಯಾರಿ ಮತ್ತು ಕನ್ನಡ ಭಾಷೆಯಲ್ಲಿ ರಚಿಸಲ್ಪಟ್ಟ ಬ್ಯಾರಿ ಫೆಲೋಶಿಫ್ ಪ್ರಬಂಧಗಳು, ಹಂಝ ಮಲಾರ್‌ರ ‘ಬ್ಯಾರಿ ಕ್ವಿಝ್ - 2017’ ಮತ್ತು ಕೆ.ವೈ. ಅಬ್ದುಲ್ ಹಮೀದ್ ಕುಕ್ಕಾಜೆಯ ಕಥಾ ಸಂಕಲನ ‘ಮಾಣಿಕ್ಯತ್ತೊ ಕಲ್‌ಲ್’ ಹಾಗೂ ಸಫಿಯಾ ಬಾನು ಉಳ್ಳಾಲ ಅವರ ‘ಮದ್‌ರ ಸೀಕ್‌ಗ್ ಮರಂದ್’ ಮತ್ತು ಮರಿಯಂ ಇಸ್ಮಾಯೀಲ್ ಉಳ್ಳಾಲಬೈಲ್‌ರ ‘ನಾಟಿ ಮರಂದ್’ ಕೃತಿಗಳು ಬಿಡುಗಡೆಗೊಂಡವು.

► ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ.ಮುಹಮ್ಮದಾಲಿ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ. ನಾವಡ, ಪುಟ ವಿನ್ಯಾಸಕಾರ ದಿನಕರ ಡಿ. ಬಂಗೇರ, ಪತ್ರಕರ್ತ ಹಂಝ ಮಲಾರ್ ಹಾಗೂ ಕೃತಿಗಳ ಲೇಖಕರನ್ನು ಸನ್ಮಾನಿಸಲಾಯಿತು.

►ಫೆಲೋಶಿಪ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

►ಅಶ್ರಫ್ ಅಪೋಲೊ ಮತ್ತು ಝಿಯಾ ಕಲ್ಲಡ್ಕ ಅವರಿಂದ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News