ಮೂಡುಬಿದಿರೆಯಲ್ಲಿ ಮೋಹನ ಆಳ್ವರನ್ನು ಬೆಂಬಲಿಸಿ ಬೃಹತ್ ಸಭೆ

Update: 2017-08-12 17:02 GMT

ಮೂಡುಬಿದಿರೆ, ಆ.12: ಆಳ್ವಾಸ್ ಕಾಲೇಜಿನ ಎಸೆಸೆಲ್ಸಿ ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ಸಾವಿನ ಹಿನ್ನಲೆಯಲ್ಲಿ ಆಳ್ವಾಸ್ ವಿದ್ಯಾಸಂಸ್ಥೆಯ ವಿರುದ್ಧ ನಡೆಯುತ್ತಿರುವ ಅಪಪ್ರಚಾರಗಳ ವಿರುದ್ಧ ಆಳ್ವಾಸ್ ಬೆಂಬಲಿಗರ ಬೃಹತ್ ಸಭೆಯು ಶನಿವಾರ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ, ‘ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವಿನ ವಿಚಾರ ಕಾನೂನಿನ ವ್ಯಾಪ್ತಿಯಲ್ಲಿ ಬರುವಂತಹುದು. ಅದೊಂದು ರಾಜಕೀಯ ಷಡ್ಯಂತ್ರದ ಭಾಗವಾಗಬಾರದು. ಸರಕಾರಿ ಸಮಿತಿಗಳು ಆಳ್ವಾಸ್ ಕಾಲೇಜಿನ ವ್ಯವಸ್ಥೆಗಳ ಬಗ್ಗೆ ತನಿಖೆ ನಡೆಸುವ ಬದಲು ರಾಜ್ಯದಲ್ಲಿರುವ ಸರಕಾರಿ ಹಾಸ್ಟೆಲ್‌ಗಳ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಲಿ. ಜನರು ಅಸತ್ಯಗಳನ್ನು ನಂಬದೇ ಪ್ರಾಮಾಣಿಕ ಪರಿಶ್ರಮಿ ಮೋಹನ ಆಳ್ವರ ಬೆಂಬಲಕ್ಕೆ ನಿಲ್ಲಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಒಬ್ಬರಾಗಿದ್ದ ಮುಲ್ಕಿ ಚರ್ಚಿನ ಧರ್ಮಗುರು ರೆ.ಫಾ.ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಮಾತನಾಡಿ, ಡಾ.ಮೋಹನ ಆಳ್ವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನಗಳು ನಡೆಯುತ್ತಿವೆ. ಒಂದು ವಿದ್ಯಾಸಂಸ್ಥೆ ಕಟ್ಟುವುದು ಸುಲಭದ ಮಾತಲ್ಲ. ಕಾವ್ಯಾ ಪೂಜಾರಿ ಸಾವು ಸಮಾಜದ ಎಲ್ಲರಿಗೂ ನೋವು ತಂದಿರುವ ವಿಚಾರ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪೊಲೀಸ್ ಇಲಾಖೆ ಸಮರ್ಥವಾಗಿದೆ. ಆದರೆ ಸಂಸ್ಥೆ ಹಾಗೂ ಆಳ್ವರ ವಿರುದ್ಧ ವೃಥಾ ಅಪವಾದ ಸಲ್ಲದು ಎಂದರು.

ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಮಾತನಾಡಿ, ವದಂತಿಗಳ ಮೂಲಕ ಆಳ್ವಾಸ್ ಶಿಕ್ಷಣ ಸಂಸ್ಥೆಯನ್ನು ಕೆಲವು ಗುರಿ ಮಾಡಲಾಗುತ್ತಿದೆ. ಮಾದರಿ ಶಿಕ್ಷಣ ಸಂಸ್ಥೆಯನ್ನು ಜನರು ಬೆಂಬಲಿಸುವ ಮೂಲಕ ಸಮಾಜದಲ್ಲಿ ಶಾಂತಿ ನಿರ್ಮಾಣವಾಗಲಿ. ಆಳ್ವಾಸ್ ಶಿಕ್ಷಣ ಸಂಸ್ಥೆ ಜಾತ್ಯಾತೀತ ನೆಲೆಯಲ್ಲಿ ಕಾರ್ಯಾಚರಿಸುತ್ತಿದ್ದು, ಸಾಂಸ್ಕತಿಕ ನೆಲೆಗಟ್ಟಿನ ಸಾಧನೆಯಲ್ಲಿ ಯಶಸ್ವಿಯಾಗಿದೆ. ಶಿಕ್ಷಣ ಸಂಸ್ಥೆಯನ್ನು ಆಡಿಟ್‌ಗೊಳಪಡಿಸಿದಾಗ ಅದು ವೇದ್ಯವಾಗುತ್ತದೆ. ಇಂತಹ ಸಾಧಕ ಸಂಸ್ಥೆ ಖಿನ್ನಗೊಳ್ಳುವಂತಾಗಬಾರದು. ಹೀಗಾಗಿ ಜನರ ಬೆಂಬಲ ಅನಿವಾರ್ಯ ಎಂದರು.

ಹಿರಿಯ ಸಾಹಿತಿ ವೈದೇಹಿ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ. ಯಶೋವರ್ಮ, ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಸದಾನಂದ ಶೆಟ್ಟಿ, ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಬ್ರಿಗೇಡಿಯರ್ ಐ.ಎನ್. ರೈ ಭಾಗವಹಿಸಿದ್ದರು.

ಸಂಘಟಕರ ಪರವಾಗಿ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ, ಮಂಗಳೂರು ಶಾರದಾ ವಿದ್ಯಾ ಸಂಸ್ಥೆಗಳ ಸಂಚಾಲಕ ಎಂ.ಬಿ.ಪುರಾಣಿಕ್, ಸಹ್ಯಾದ್ರಿ ಸಮೂಹ ಸಂಸ್ಥೆಗಳ ಚೇರ್‌ಮೆನ್ ಮಂಜುನಾಥ ಭಂಡಾರಿ, ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಕೆ.ಸದಾನಂದ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಧಾಕರ ಶೆಟ್ಟಿ, ವಿಜಯ ವಿಠಲನಾಥ ಶೆಟ್ಟಿ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಸುಂದರ್ ಜಿ. ಆಚಾರ್ಯ, ಮಂಡ್ಯ ನಗರಸಭೆಯ ಮಾಜಿ ಅಧ್ಯಕ್ಷೆ ಅಂಬುಜಮ್ಮ, ಯಶವಂತ, ಅಂತರಾಷ್ಟ್ರೀಯ ಕ್ರೀಡಾಪಟು ಸಹನಾ ಪೂಜಾರಿ, ಗಣೇಶ್ ಕುಂದಾಪುರ, ಹಳೆ ವಿದ್ಯಾರ್ಥಿಗಳಾದ ಸಬಿತಾ ಮೊನೀಶ್, ಅನಿರುದ್ಧ ಅವರು ಡಾ. ಆಳ್ವರ ಕಾಳಜಿ, ಸಾಧನೆ, ನಡೆ-ನುಡಿಗಳ ಬಗ್ಗೆ ಮಾತನಾಡಿದರು.

ತೋಡಾರು ದಿವಾಕರ ಶೆಟ್ಟಿ ಖಂಡನಾ ನಿರ್ಣಯ ವಾಚಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೃಷಿಕ ಸಮಾಜದ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News