ಕಲ್ಮಾಡಿ ಆರೋಗ್ಯ ಮಾತೆಯ ಮೂರ್ತಿ ಮೆರವಣಿಗೆ

Update: 2017-08-13 14:19 GMT

ಉಡುಪಿ, ಆ.13: ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಪ್ರತಿಷ್ಠಾಪನಾ ಮಹೋತ್ಸವದ ಪೂರ್ವಭಾವಿಯಾಗಿ ಆರೋಗ್ಯ ಮಾತೆಯ ಮೂರ್ತಿಯ ಮೆರವಣಿಗೆ ಕಾರ್ಯಕ್ರಮ ರವಿವಾರ ನಡೆಯಿತು.

ಆದಿಉಡುಪಿಯ ಕರಾವಳಿ ಜಂಕ್ಷನ್‌ನಲ್ಲಿ ಆರೋಗ್ಯ ಮಾತೆ ಮೂರ್ತಿಯ ಮೆರವಣಿಗೆಗೆ ಮೂಡುಬೆಳ್ಳೆ ಕಪುಚಿನ್ ಸಭೆಯ ಧರ್ಮಗುರುಗಳಾದ ವಂ. ವಲೇರಿಯನ್ ಡಿಸಿಲ್ವಾ ಅವರು ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು.

ಬಳಿಕ ಪವಾಡ ಮೂರ್ತಿಯನ್ನು ಆದಿ ಉಡುಪಿ ಜಂಕ್ಷನ್ ಬಳಿಯಿಂದ ಕಲ್ಮಾಡಿ ಚರ್ಚಿಗೆ ನೂರಾರು ಭಕ್ತರೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯ ಲಾಯಿತು.

ಪುಣ್ಯಕ್ಷೇತ್ರದ ಪ್ರತಿಷ್ಟಾಪನಾ ಮಹೋತ್ಸವ ಆ.15ರಂದು ನಡೆಯಲಿದ್ದು, ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರ ನೇತೃತ್ವದಲ್ಲಿ ಬೆಳಿಗ್ಗೆ 10:30ಕ್ಕೆ ಕೊಂಕಣಿ ಭಾಷೆಯಲ್ಲಿ ಮಹೋತ್ಸವದ ಪ್ರಧಾನ ಬಲಿಪೂಜೆಯನ್ನು ಅರ್ಪಿಸಲಾಗುವುದು. ಅಂದು ಬೆಳಿಗ್ಗೆ 7 ಗಂಟೆಗೆ ಕೊಂಕಣಿ ಭಾಷೆ, 4 ಗಂಟೆಗೆ ಕನ್ನಡ ಹಾಗೂ 6 ಗಂಟೆಗೆ ಇಂಗ್ಲಿಷ್ ಭಾಷೆಯಲ್ಲಿ ಪೂಜೆಗಳಿದ್ದು, ಅಪರಾಹ್ನ 12:00ಕ್ಕೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ.

ಆರೋಗ್ಯ ಮಾತೆಯ ಮೂರ್ತಿಯ ಮೆರವಣಿಗೆಯಲ್ಲಿ ಚರ್ಚಿನ ಧರ್ಮಗುರು ವಂ.ಆಲ್ಬನ್ ಡಿಸೋಜಾ, ಅತಿಥಿ ಧರ್ಮಗುರುಗಳಾದ ವಂ. ಜೇಮ್ಸ್ ಕ್ವಾಡ್ರಸ್, ವಂ. ಸ್ಟೀವನ್ ಲೂವಿಸ್, ಬ್ರದರ್ ಪ್ರಮೋದ್, ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News