ಗೋಹತ್ಯೆ ಆರೋಪ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಮೂವರ ಬಂಧನ
ಮುಝಫರ್ನಗರ, ಆ.16: ಗೋಹತ್ಯೆ ಮಾಡಿದ ಆರೋಪದಲ್ಲಿ ಜೂನ್ನಲ್ಲಿ ಮೂವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ) ಯಡಿ ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಜನ್ಸಥ್ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಕ ಗ್ರಾಮದಲ್ಲಿ ಜೂನ್ 24ರಂದು ಗೋಹತ್ಯೆ ಮಾಡಿದ ಆರೋಪದಲ್ಲಿ ಖಲೀಲ್, ಭುರಾ ಮತ್ತು ಇನಾಮ್ ಖುರೇಷಿ ಎಂಬವರನ್ನು ಬಂಧಿಸಲಾಗಿದ್ದು ಇವರ ಬಳಿಯಿಂದ ಒಂದು ಕ್ವಿಂಟಾಲ್ ದನದ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಸ್.ಪ್ರಿಯದರ್ಶಿ ತಿಳಿಸಿದ್ದಾರೆ. ಅಂದಿನಿಂದ ಈ ಮೂವರೂ ಜೈಲಿನಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಹತ್ಯೆ ಮತ್ತು ಹಾಲು ಕರೆಯುವ ದನಗಳನ್ನು ಹತ್ಯೆಮಾಡುವ ಉದ್ದೇಶಕ್ಕಾಗಿ ಅಕ್ರಮ ಸಾಗಿಸುವ ಕೃತ್ಯದಲ್ಲಿ ನಿರತರಾಗಿರುವ ವ್ಯಕ್ತಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಹಾಗೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಎಲ್ಲಾ ಜಿಲ್ಲಾ ಪೊಲೀಸ್ ಠಾಣೆಗಳ ಮುಖ್ಯಾಧಿಕಾರಿಗಳಿಗೆ ಆದೇಶ ರವಾನಿಸಿದ್ದಾರೆ.