ಮಾಸಿಕ ಕೆಡಿಪಿ ಸಭೆಯಲ್ಲಿ ಜಿಪಂ ಅಧ್ಯಕ್ಷರಿಂದ ಅಧಿಕಾರಿಗಳ ತರಾಟೆ

Update: 2017-08-16 14:17 GMT

ಉಡುಪಿ, ಆ.16: ಉಡುಪಿ ನಗರದ ಮಧ್ಯದಲ್ಲಿದ್ದ ಶತಮಾನದಷ್ಟು ಹಳೆಯದಾದ ಸರಕಾರಿ ಮಹಾತ್ಮ ಗಾಂಧಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳಾಂತರ ಅಥವಾ ವಿಲೀನ ಪ್ರಕ್ರಿಯೆ ಬಗ್ಗೆ ಜಿಪಂಗೆ ಯಾವುದೇ ಮಾಹಿತಿ ನೀಡದಿವ ಬಗ್ಗೆ ಜಿಪಂ ಅಧ್ಯಕ್ಷ ದಿನಕರ ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಣಿಪಾಲದಲ್ಲಿರುವ ಉಡುಪಿ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಜುಲೈ ತಿಂಗಳ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಜಿಪಂ ವ್ಯಾಪ್ತಿಯಡಿ ಬಂದರೂ ಸಂಬಂಧಪಟ್ಟ ಅಧಿಕಾರಿಗಳು ಜಿಪಂನ ಗಮನಕ್ಕೆ ತಾರದೆ ಮಕ್ಕಳನ್ನು ಬೇರೆ ಶಾಲೆಗೆ ವರ್ಗಾಯಿಸಿರುವ ಹಾಗೂ ಶಾಲೆಯನ್ನು ಬೇರೆ ಶಾಲೆ ಜೊತೆ ವಿಲೀನಗೊಳಿಸುವ ಪ್ರಕ್ರಿಯೆ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಬಂದಿರುವುದು ದುರದೃಷ್ಟಕರ ಎಂದ ದಿನಕರ ಬಾಬು, ಮುಂದಿನ ಸಾಮಾನ್ಯ ಸಭೆಯಲ್ಲಿ ಶಾಲೆಯನ್ನು ದುರಸ್ತಿ ಪಡಿಸಿ ಉಳಿಸಿ ಕೊಳ್ಳುವ ಸಂಬಂಧ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.

ಶಾಲೆಯಲ್ಲಿರುವ ಶಿಕ್ಷಕರನ್ನು ಏನು ಮಾಡಿದಿರಿ ಎಂದು ಡಿಡಿಪಿಐ ಅವರನ್ನು ಪ್ರಶ್ನಿಸಿದ ಅಧ್ಯಕ್ಷರು, ಈ ಸಂಬಂಧದ ಎಲ್ಲಾ ಕಡತಗಳನ್ನು ತಮ್ಮ ಮುಂದೆ ಮಂಡಿಸಲು ಆದೇಶ ನೀಡಿದರು. ಶಿಥಿಲಾವಸ್ಥೆಯಲ್ಲಿರುವ, ಅಪಾಯಕಾರಿ ಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳ ಮಾಹಿತಿಯನ್ನು ನೀಡಲು ಈಗಾಗಲೇ ಸೂಚಿಸಲಾಗಿದ್ದು, ಈ ಸಂಬಂಧ ಸ್ವೀಕರಿಸಿದ ಪಟ್ಟಿಯಲ್ಲೂ ಮೈನ್ ಶಾಲೆ ಹೆಸರು ಇಲಿಲ್ಲ ಎಂದು ಅಧ್ಯಕ್ಷರು ಹೇಳಿದರು.

ಶಾಲೆಯ ವಿದ್ಯಾರ್ಥಿಗಳು 71ನೇ ಸ್ವಾತಂತ್ರೋತ್ಸವವನ್ನು ಆಚರಿಸಿ ಶಾಲೆ ಯನ್ನು ಮುಂದುವರಿಸಬೇಕೆಂದು ಮಾಡಿದ ಒತ್ತಾಯ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಅಧಿಕಾರಿಗಳಲ್ಲಿ ಸೂಕ್ತ ಮಾಹಿತಿ ಇಲ್ಲ ಎಂದು ಅಧ್ಯಕ್ಷರು ಸಭೆಯ ಗಮನಸೆಳೆದರು.

ಕಡತ ಪರಿಶೀಲಿಸಿ ಮಾಹಿತಿ ನೀಡುವುದಾಗಿ ಮುಖ್ಯ ಯೋಜನಾಧಿಕಾರಿ ಅಧ್ಯಕ್ಷರಿಗೆ ಉತ್ತರಿಸಿದರು. ಬೈಕಾಡಿ ಅಂಗನವಾಡಿ ಕೇಂದ್ರದ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ, ಇಲಾಖಾ ಕಟ್ಟಡಗಳ ಆರ್‌ಟಿಸಿ ಮಾಡುವ ಬಗ್ಗೆ ಅನುಪಾಲನಾ ಕ್ರಮಗಳ ಬಗ್ಗೆಯೂ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಸಬೆಯಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಧ್ಯಕ್ಷರು, ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೊಟೀಸು ನೀಡಲು ಸೂಚನೆ ನೀಡಿದರು.

ಒಂದು ತಿಂಗಳ ಹಿಂದೆ ಜಿಪಂನ ಸೊತ್ತುಗಳ ಬಗ್ಗೆ ಮಾಹಿತಿ ಕೇಳಿ ಟಪ್ಪಣಿ ಹಾಕಿದ್ದು ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಜಿಪಂನ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿಗಳ ಗಮನಕ್ಕೆ ತಂದರು. ಇಲಾಖಾ ಆರ್‌ಟಿಸಿ ಹಾಗೂ ಜಿಪಂ ಸೊತ್ತುಗಳ ಬಗ್ಗೆ ಮಾಹಿತಿ ನೀಡಲು ಅಗತ್ಯ ನಿರ್ದೇಶನ ಹಾಗೂ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿಇಓ ಶಿವಾನಂದ ಕಾಪಶಿ ಉತ್ತರಿಸಿದರು.

ಸೌಪರ್ಣಿಕ ಏತ ನೀರಾವರಿ ಯೋಜನೆಯಡಿ ರೈತರಿಗೆ ನೀರೊದಗಿಸುವ ಬಗ್ಗೆ, ಗ್ರಾಪಂಗಳಲ್ಲಿ ತೆರಿಗೆ ಪರಿಷ್ಕರಣೆ ಮಾಡುವ ಬಗ್ಗೆ, ಕುಂದಾಪುರದ ನಾವುಂದ ಗ್ರಾಪಂ ವ್ಯಾಪ್ತಿಯ ಗ್ರಾಮದ ಕಟ್ಟಡ ಪರವಾನಿಗೆ ಬಗ್ಗೆ, ಕೆಎಸ್‌ಆರ್ ಟಿಸಿ ಮತ್ತು ಖಾಸಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಸಾರ್ವಜನಿಕ ಹಿತಾಸಕ್ತಿ ಯನ್ನು ಗಮನಿಸದೆ ಸಂಚರಿಸುವ ಬಗ್ಗೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬೇಕೆಂದು ಆಗ್ರಹಿಸಿದರು.

ಜಿಲ್ಲೆಯ ವಸತಿ ಯೋಜನೆಗಳಿಗೆ ಪಿಡಬ್ಲುಡಿ, ಕೆಆರ್‌ಐಡಿಎಲ್ ಮತ್ತು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಮರಳು ನೀಡಿರುವ ಮಾಹಿತಿಯನ್ನು ಸಾಮಾನ್ಯ ಸಭೆಗೆ ಒದಗಿಸಿ ಎಂದು ಬಾಬು ಶೆಟ್ಟಿ ಹೇಳಿದರು. ಗ್ರಾಪಂಗೆ ಮರಳು ರಾಯಲ್ಟಿ ನೀಡುತ್ತಿಲ್ಲ ಎಂದ ಬಾಬು ಶೆಟ್ಟಿ, ಬೈಂದೂರು ಚುನಾವಣಾ ಶಾಖೆಯಲ್ಲಿ ಸಿಬ್ಬಂದಿಗಳಿಲ್ಲದೆ ಬಗ್ಗೆ ಕ್ರಮಕೈಗೊಳ್ಳಿ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಡೆಂಗ್ ಇಳಿಮುಖವಾಗಿದ್ದು, ಮಲೇರಿಯಾ ಕಳೆದ ಬಾರಿಗೆ ಹೋಲಿಸಿದರೆ ಹತೋಟಿಯಲ್ಲಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಡೆಂಗ್ ಇಳಿಮುಖವಾಗಿದ್ದು, ಮಲೇರಿಯಾ ಕಳೆದ ಬಾರಿಗೆ ಹೋಲಿಸಿದರೆ ಹತೋಟಿಯಲ್ಲಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಜಿಪಂಗೆ ಅನುದಾನ ಸಂಪೂರ್ಣವಾಗಿ ಬಿಡುಗಡೆಯಾಗಿದ್ದು ಕ್ರಿಯಾಯೋಜನೆಗೂ ಅನುಮೋದನೆ ನೀಡಲಾಗಿದೆ. ಕ್ರಿಯಾಯೋಜನೆಯಂತೆ ಎಲ್ಲ ಕೆಲಸಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ ಎಂದು ಮುಖ್ಯ ಯೋಜನಾಧಿಕಾರಿಗಳು ಎಲ್ಲ ಇಲಾಖಾಧಿಕಾರಿಗಳಿಗೆ ಸ್ಪಷ್ಟ ಸೂಚನೆಯನ್ನು ಸಭೆಯಲ್ಲಿ ನೀಡಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News