ಸೇತುವೆಗಳ ನಿರ್ಮಾಣಕ್ಕೆ 80 ಕೋಟಿ ರೂ. ವೆಚ್ಚ: ಸಚಿವ ಪ್ರಮೋದ್
ಉಡುಪಿ, ಆ.16: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 4 ವರ್ಷಗಳ ಅವಧಿಯಲ್ಲಿ ಸೇತುವೆಗಳ ನಿರ್ಮಾಣಕ್ಕಾಗಿ 80 ಕೋಟಿ ರೂ. ವ್ಯಯ ಮಾಡಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಕೊಡಂಕೂರು ಮೂಲಕ್ಷೇತ್ರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಬಳಿ 50 ಲಕ್ಷ ರೂ. ಸರಕಾರ ಅನುದಾನದಲ್ಲಿ ನಿರ್ಮಿಸಲಾದ ಸೇತುವೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಈ ಸೇತುವೆಗೆ 35ಲಕ್ಷ ರೂ. ವ್ಯಯಿ ಸಲಾಗಿದ್ದು, ಉಳಿದ ಹಣವನ್ನು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡ ಲಾಗುವುದು. ಅದರ ನಂತರವೂ ಹಣ ಉಳಿದರೆ ಅದನ್ನು 1.25 ಕೋಟಿ ರೂ. ವೆಚ್ಚದಲ್ಲಿ ನಡೆಸುವ ಕಲ್ಸಂಕ ತೋಡಿನ ಅಗಲೀಕರಣ ಕಾಮಗಾರಿಗೆ ಬಳಸಿ ಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ಸದಸ್ಯರಾದ ಜಾನಕಿ ಶೆಟ್ಟಿಗಾರ್, ಯುವರಾಜ್, ಶಾಂತಾ ರಾಮ್ ಸಲ್ವಾಂಕರ್, ಗಣೇಶ್ ನೇರ್ಗಿ, ಸೆಲಿನಾ ಕರ್ಕಡ, ಜನಾರ್ದನ್ ಭಂಡಾರ್ಕರ್, ಪೌರಾಯುಕ್ತ ಡಿ.ಮಂಜುನಾಥಯ್ಯ, ನಗರಸಭೆಯ ಇಂಜಿನಿ ಯರ್ ಗಣೇಶ್, ಸೇತುವೆಗೆ ಜಾಗ ನೀಡಿದ ಗೋಪಾಲ ಶೆಟ್ಟಿಗಾರ್, ಕ್ಷೇತ್ರದ ಜಗನ್ನಾಥ ಶೆಟ್ಟಿ, ಗೋಪಾಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.