ಭಟ್ಕಳ: ಬೈಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ರ‍್ಯಾಲಿ

Update: 2017-08-16 16:24 GMT

ಭಟ್ಕಳ, ಆ. 16: ನಗರದಲ್ಲಿ ಹಾದುಹೋಗಿರುವ ರಾ.ಹೆ.66ರನ್ನು ಬೈಪಾಸ್ ಮೂಲಕ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಬುಧವಾರ ಸಂಜೆ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ನೇತೃತ್ವದಲ್ಲಿ ಸುಮಾರು 15ಕ್ಕೂ ಹೆಚ್ಚು ಸಂಘಟನೆಗಳ ಸಾವಿರಕ್ಕೂ ಅಧಿಕ ಮಂದಿ ಹಾಗೂ ಸಾರ್ವಜನಿಕರು ಪ್ರತಿಭಟನಾ ರ್ಯಾಲಿ ನಡೆಸುವುದರ ಮೂಲಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಉತ್ತರಕನ್ನಡ ಜಿಲ್ಲೆಯ ದಕ್ಷಿಣದ ತುದಿಯಲ್ಲಿರುವ ಹಿಂದೂ ಮುಸ್ಲಿಮ್ ಭಾವೈಕ್ಯತೆ ಸಾರುವ ಸುಂದರ ನಗರ ಭಟ್ಕಳ ರಾ.ಹೆ. ನಿರ್ಮಾಣದಿಂದಾಗಿ ಎರಡು ಸಮುದಾಯಗಳ ಮಧ್ಯೆ ಅಂತರವನ್ನು ಸೃಷ್ಟಿಸುತ್ತಿದ್ದು ಇದರಿಂದಾಗಿ ಭಟ್ಕಳದ ಭಾವೈಕ್ಯತೆಗೆ ಧಕ್ಕೆಯುಂಟಾಗುತ್ತದೆ. ಆದ್ದರಿಂದ ಹೆದ್ದಾರಿಯನ್ನು ಬೈಪಾಸ್ ಮೂಲಕ ನಿರ್ಮಾಣ ಮಾಡಬೇಕೆಂದು ಮನವಿಪತ್ರದಲ್ಲಿ ಆಗ್ರಹಿಸಲಾಗಿದೆ.

ಭಟ್ಕಳ ನಗರದಲ್ಲಿ ಖಾಸಗೀ ಜಮೀನು ಕೆಲವೇ ಹೆಕ್ಟೇರ್‌ಗಳಷ್ಟಿದ್ದು ಇಲ್ಲಿನ ಜನಜೀವನಕ್ಕೆ ಅಗತ್ಯವಿದ್ದಷ್ಟು ಇರುವುದಿಲ್ಲ. ರಾಷ್ಟ್ರೀಯ ಸ್ಮಾರಕಗಳಿಗೆಂದು 300ಮೀಟರ್ ಸ್ಥಳವನ್ನು ಸಂರಕ್ಷಿತ ಸ್ಥಳವೆಂದು ಘೋಷಿಸಿದ್ದು ಜಾಗದ ಕೊರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಮಧ್ಯೆ ಹೆದ್ದಾರಿ ನಿರ್ಮಾಣಕ್ಕಾಗಿ ಸಾರ್ವಜನಿಕರ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದೆಯಾದಲ್ಲಿ ಇಲ್ಲಿನ ನಗರವಾಸಿಗಳ ಬದುಕು ದುರಂತಮಯವಾಗುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ ಈ ಎಲ್ಲ ಕಾರಣಗಳಿಂದಾಗಿ ಹೆದ್ದಾರಿಯನ್ನು ಬೈಪಾಸ್ ಮೂಲಕವೇ ನಿರ್ಮಾಣ ಮಾಡಬೇಕೆಂದು ಮನವಿಪತ್ರದಲ್ಲಿ ಬಲವಾಗಿ ಆಗ್ರಹಿಸಲಾಗಿದೆ.

ನಗದ ಹೃದಯಭಾಗವಾಗಿರುವ ಶಮ್ಸುದ್ದೀನ್ ವೃತ್ತದಲ್ಲಿ ಹೆದ್ದಾರಿ ಇಕ್ಕೆಲಗಳಲ್ಲಿ ಅಂಗಡಿ ಮಳಿಗೆ, ವಾಸ್ತವ್ಯದ ಮನೆಗಳು, ವಾಣಿಜ್ಯಸಂಕೀರ್ಣಗಳು ತಲೆ ಎತ್ತಿನಿಂತಿದ್ದು ದಿನಾಲು ಸಾವಿರಾರು ಜನರು ಇದರಿಂದ ತಮ್ಮ ಉದ್ಯೋಗಗಳನ್ನು ಕಂಡುಕೊಂಡಿದ್ದಾರೆ. ಬೈಪಾಸ್ ಮಾಡಲು ಈಗಾಗಲೆ ಇಲಾಖೆ ಪ್ರಾಥಮಿಕ ಸರ್ವೆ ಕೈಗೊಂಡಿದ್ದು ಅದರಂತೆ ಮುಂದಿನ ಕ್ರಮವನ್ನು ಜರಗಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದ್ದು ಶಮ್ಸುದ್ದೀನ್ ವೃತ್ತದಲ್ಲಿ ಫ್ಲೈಒವರ್ ನಿರ್ಮಿಸುವುದರಿಂದಾಗಿ ಮುಂದಿನ ದಿನಗಳಲ್ಲಿ ಹಲವು ತೊಂದರೆಗಳು ಉಂಟಾಗಿ ಇಲ್ಲಿನ ಹಿಂದೂ ಮುಸ್ಲಿಮ್ ಭಾವೈಕ್ಯತೆ ಸಂಪೂರ್ಣ ಹದಗೆಡುವುದರಲ್ಲಿ ಯಾವುದೇ ಸಂಶಯವಿಲ್ಲ. ನಗರದಿಂದ ಹಾದುಹೋಗುವ ಹೆದ್ದಾರಿಯಿಂದಾಗಿ ಜೀವಹಾನಿ ಸಂಭವಿಸುವುದು ಹೆಚ್ಚಾಗುತ್ತಿದ್ದು ಇದನ್ನು ತಪ್ಪಿಸಲು ಬೈಪಾಸ್ ನಿರ್ಮಾಣವೊಂದೇ ಸರಿಯಾದ ಮಾರ್ಗವಾಗಿದೆ ಎಂದು ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಯನ್ನು ಆಗ್ರಹಿಸಿವೆ.

ಒಂದು ವೇಳೆ ಬೈಪಾಸ್ ನಿರ್ಮಾಣ ಅಸಾಧ್ಯವೆಂದಾದರೆ ಉಸ್ಮಾನ್ ನಗರದಿಂದ ಹನೀಫಾಬಾದ್ ಕ್ರಾಸ್ ವರೆಗೆ ಕೇವಲ 30ಮೀಟರ್ ಅಗಲ ಮೆಟ್ರೋ ಮಾದರಿಯಲ್ಲಿ ಫ್ಲೈಒವರ್ (ಸಿಂಗಲ್ ಪಿಲ್ಲರ್) ಮಾಡಿ ಕೆಳಗಡೆಯಿಂದ ಸರ್ವಿಸ್ ರಸ್ತೆಯನ್ನು ಒದಗಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದೆ.

ಪ್ರತಿಭಟನೆಯಲ್ಲಿ ರಾಬಿತಾ ಸೂಸೈಟಿ, ವರ್ತಕರ ಸಂಘ, ಸೇವಾವಾಹಿನಿ, ತಾಲೂಕು ನಗರೀಕ ಹಿತರಕ್ಷಣಾ ವೇದಿಕೆ, ಆಟೋರಿಕ್ಷಾ ಚಾಲಕ, ಮಾಲಕರ ಸಂಘ, ಪುರಸಭೆ ಅಧ್ಯಕ್ಷರು, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಹೆದ್ದಾರಿ ಹೋರಾಟ ಸಮಿತಿ, ಟಾಪ್ ಎಮರ್ಜೆನ್ಸಿ ಹೆಲ್ಪಿಂಗ್ ಅಸೋಸಿಯೇಶನ್ ಸೇರಿಂದತೆ ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮುಹಮ್ಮದ್ ಮುಝಮ್ಮಿಲ್ ಕಾಝಿಯಾ, ರಾಜೇಶ್ ನಾಯ್ಕ, ವೆಂಕಟೇಶ್ ಪ್ರಭು, ಎಲ್ ಎಸ್.ನಾಯ್ಕ, ಮುಹಮ್ಮದ್ ಸಾದಿಕ್ ಮಟ್ಟಾ, ಎಂ.ಜೆ. ಅಬ್ದುಲ್ ರಖೀಬ್, ಅಲ್ತಾಫ್ ಖರೂರಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News