ಅಶ್ರಫ್ ಕಲಾಯಿ ಕೊಲೆ ಪ್ರಕರಣ: 8 ಮಂದಿ ಆರೋಪಿಗಳ ಜಾಮೀನು ತಿರಸ್ಕೃತ
Update: 2017-08-17 21:05 IST
ಮಂಗಳೂರು, ಆ.17: ಬೆಂಜನಪದವಿನಲ್ಲಿ ನಡೆದ ಎಸ್ಡಿಪಿಐ ಮುಖಂಡ ಅಶ್ರಫ್ ಕಲಾಯಿ ಕೊಲೆ ಪ್ರಕರಣದಲ್ಲಿ ಬಂಧಿತ 9 ಮಂದಿ ಆರೋಪಿಗಳ ಪೈಕಿ 8 ಮಂದಿಗೆ 6ನೆ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಗುರುವಾರ ಜಾಮೀನು ತಿರಸ್ಕರಿಸಿದೆ.
ಜೂ. 21ರಂದು ಅಶ್ರಫ್ ಕಲಾಯಿ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಭರತ್ ಕುಮ್ಡೇಲು, ದಿವ್ಯರಾಜ್ ಶೆಟ್ಟಿ, ಪವನ್ ಕುಮಾರ್, ಶಿವಪ್ರಸಾದ್, ರಂಜಿತ್, ಸಂತೋಷ್, ಅಭಿನ್ ರೈ, ಪ್ರದೀಪ್, ರಮೇಶ್ ಕುಮಾರ್ ಎಂಬವರನ್ನು ಬಂಧಿಸಲಾಗಿತ್ತು.
ಬಂಧಿತರಲ್ಲಿ ರಮೇಶ್ ಕುಮಾರ್ಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನು ನೀಡಿದೆ. ಈತನ ವಿರುದ್ಧ ಆರೋಪಿಗಳ ಮೊಬೈಲ್ ಇಡಲು ಸಹಕಾರ ನೀಡಿದ್ದ ಆರೋಪವಿದೆ. ಉಳಿದವರು ಕೊಲೆ ಪ್ರಕರಣದಲ್ಲಿ ಭಾಗಿಯಾದವರು ಎಂದು ತಿಳಿದುಬಂದಿದೆ. ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಜುಡಿತ್ ಒ.ಎಂ. ಕ್ರಾಸ್ತಾ ವಾದಿಸಿದ್ದರು.