×
Ad

ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ

Update: 2017-08-19 22:30 IST

ಪಡುಬಿದ್ರೆ, ಆ. 19: ಕೇಂದ್ರ ಸರ್ಕಾರ ಹೆಚ್ಚು ಬೆಲೆಗೆ ಖರೀದಿಸಿ ಕಡಿಮೆ ದರಕ್ಕೆ ರಾಜ್ಯಕ್ಕೆ ನೀಡಿದ ಅಕ್ಕಿ ಹಾಗೂ ಗೋಧಿಯನ್ನು ಮರುಪಾಲಿಶ್ ಮಾಡಿ ಕಾಂಗ್ರೆಸ್ ಪುಡಾರಿಗಳು ಪಕ್ಕದ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಉಚ್ಚಿಲ ಮಹಾಲಕ್ಷ್ಮೀ ಸಭಾಭವನದಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಿಗಳಿಗೆ ರಕ್ಷಣೆ ಇಲ್ಲ, ಮಂತ್ರಿಗಳು ಕೆಲಸ ಮಾಡುತ್ತಿಲ್ಲ, ಅಧಿಕಾರಿಗಳಿಗೆ ಒತ್ತಡ ತಂದು ಮಾಫಿಯಾ ಕೆಲಸ ಮಾಡುತ್ತಿದೆ. ಭ್ರಷ್ಟಾಚಾರ, ಮರಳು ಮಾಫಿಯಾ ಜೊತೆ ಸಿದ್ದರಾಮಯ್ಯ ಸರಕಾರ ಮಾಡುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ನೀಡಿರುವ ಅನುದಾನದ ಬಗ್ಗೆ ಲೆಕ್ಕ ಕೇಳಿದ ರಾಜ್ಯ ಸಭಾ ಸದಸ್ಯರಾಗಿರುವ ಅಮಿತ್‌ ಷಾ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರು ಎರಡು ವರ್ಷಗಳಲ್ಲಿ ಮಂಡಿಸಿದ ಲಕ್ಷ ಕೋಟಿ ರೂಪಾಯಿ ಬಜೆಟ್ ಏನಾಯಿತು ಎಂಬುದರ ಬಗ್ಗೆ ಮೊದಲು ಲೆಕ್ಕ ಕೊಡಲಿ ಎಂದು ಸವಾಲು ಹಾಕಿದ ಕರಂದ್ಲಾಜೆ, ಬಿಜೆಪಿ ಮುಖಂಡರ ವಿರುದ್ಧ ಸುಳ್ಳು ದಾಖಲೆ ಸೃಷ್ಟಿಸಿ ಪ್ರಕರಣ ದಾಖಲಿಸಿ ನೋಟಿಸ್ ನೀಡುವ ಮೊದಲು ತಾಕತ್ತಿದ್ದರೆ ದುಬಾರಿ ವಾಚ್ ಪಡೆದುಕೊಂಡ ಮುಖ್ಯಮಂತ್ರಿ ವಿರುದ್ಧ ಎಸಿಬಿಯಲ್ಲಿ ದಾಖಲಾದ ಕೇಸ್‌ಗೆ ನೋಟಿಸ್ ನೀಡಲಿ ಎಂದರು.

ಇಂದಿರಾ ಕ್ಯಾಂಟೀನ್‌ಗೆ ಎಲ್ಲಿಂದ ಆಹಾರ?: ಬಿಎಂಪಿಯಲ್ಲಿ ಆರಂಭವಾದ ಇಂದಿರಾ ಕ್ಯಾಂಟೀನ್‌ಗೆ ಆಹಾರ ಎಲ್ಲಿಂದ ಬರುತ್ತದೆ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲ. ಇಂದಿರಾ ಕ್ಯಾಂಟೀನ್ ಆರಂಭವಾಗಿ ಮೂರೇ ದಿನಗಳಲ್ಲಿ ಟೆಂಡರ್ ಪಡೆದುಕೊಂಡವರು ಆಹಾರ ಪದಾರ್ಥವನ್ನು ಅರಮನೆ ಮೈದಾನದಲ್ಲಿ ನಡೆಯುವ ಮದುವೆ ಸಮಾರಂಭದಿಂದ ಸರಬರಾಜು ಮಾಡುತ್ತಿದ್ದಾರೆ. ಇಂದಿರಾ ಕ್ಯಾಂಟೀನ್‌ಗೆ ಮದುವೆ ಮನೆಯಿಂದ ಸರಬರಾಜು ಮಾಡಲಾಗುತ್ತದೆ ಎಂದರು.

ಆಂದೋಲನ: ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ಯಾವುದೇ ರೀತಿಯ ಸಹಕಾರ ನೀಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಸಾಕಷ್ಟು ಅನುದಾನ ಬಂದಿತ್ತು. ಕಾಂಗ್ರೆಸ್ ಸರ್ಕಾರದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಜಿಲ್ಲೆಗೆ ಬಂದ ಅನುದಾನವೆಷ್ಟು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳಲ್ಲಿ ಪ್ರಶ್ನಿಸಿ. ಅದಕ್ಕಾಗಿ ಪ್ರತಿಯೊಂದು ಊರಿನಲ್ಲಿಯೂ ಲೆಕ್ಕಕೊಡಿ ಆಂದೋಲನ ಆರಂಭಿಸುವಂತೆ ಸೂಚನೆ ನೀಡಿದರು.

ಬೆಂಗಳೂರಿಗೆ ಬೈಕ್ ರ್ಯಾಲಿ: ಪ್ರತಿ ಬೂತ್‌ನಲ್ಲಿ ಎಸ್‌ಸಿ-ಎಸ್‌ಟಿ ಸೇರಿದಂತೆ 20 ಜನರ ತಂಡವನ್ನು ರಚಿಸಬೇಕು, ಪ್ರತೀ ಬೂತ್‌ನಲ್ಲಿ ಕನಿಷ್ಠ ಮೂರು ಜನ ಬೈಕ್ ಇರುವವರನ್ನು ಗುರುತಿಸಬೇಕು.

ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ರಾಷ್ಟ್ರೀಯ ಅಧ್ಯಕ್ಷರು ರಾಜ್ಯ ಭೇಟಿ ನೀಡಲಿದ್ದು, ಆ ಸಮಯದಲ್ಲಿ ರಾಜ್ಯಾದ್ಯಂತದ ಎರಡು ಲಕ್ಷ ಬೈಕ್‌ಗಳ ಮೂಲಕ ಬೆಂಗಳೂರಿಗೆ ತೆರಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷ ಸಂಘಟನೆ, ಜಿಲ್ಲೆ, ರಾಜ್ಯಕ್ಕೆ ಸಂಬಂಧಪಟ್ಟ ಹೋರಾಟವನ್ನು ನಿರಂತರ ನಡೆಸಬೇಕು. ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಹಿಂದುಳಿದಿಲ್ಲ ಎಂಬುದನ್ನು ತೋರಿಸಿಕೊಡಬೇಕು. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ಇಚ್ಛೆಯಂತೆ ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆ ನಿಂತು ಪಕ್ಕದ ಕೇರಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿಗೂ ಪಕ್ಷದ ಸಬಂಧಬಾಹುವನ್ನು ಚಾಚಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಶರತ್ ಮಡಿವಾಳ ಹತ್ಯೆ ಸಹಿತ ಹಿಂದೂ ಮುಖಂಡರ ಹತ್ಯೆಯಲ್ಲಿ ಶಾಮೀಲಾದ ಪಿಎಫ್‌ಐ ಸಹಿತ ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಬೇಕು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲೆ, ಮಂಡಲಗಳಲ್ಲಿ ಸ್ಥಾನ ನೀಡುವಂತೆ ಒತ್ತಡ ತಂದು, ಸ್ಥಾನ ಪಡೆದ ನಂತರ ಕಾರ್ಯಕಾರಿಣಿಯಲ್ಲಿ ಗೈರು ಹಾಜರಾಗುವುದನ್ನು ಪಕ್ಷ ಸಹಿಸುವುದಿಲ್ಲ. ಅಂತವರಿಗೆ ನೋಟಿಸ್ ನೀಡಲಾಗುವುದು. ಇಲ್ಲವೆ ಮೂಲಾಜಿಲ್ಲದೆ ಜವಾಬ್ದಾರಿಯಿಂದ ಕೆಳಗಿಳಿಸಲಾಗುವುದು.
ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಜಿ ಆರ್ ಮೆಂಡನ್, ಜಿಲ್ಲಾ ಪಂ. ಅಧ್ಯಕ್ಷ ದಿನಕರಬಾಬು, ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕೆ.ಉದಯಕುಮಾರ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ, ಕೆ.ಸುರೇಶ್‌ ನಾಯಕ್, ಯಶಪಾಲ್ ಸುವರ್ಣ, ಕಾಪು ಮಂಡಲ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News