ಕನ್ಹಯ್ಯರತ್ತ ಮೊಟ್ಟೆ ಎಸೆದ ಬಿಜೆಪಿ ಕಾರ್ಯಕರ್ತರು

Update: 2017-08-22 14:34 GMT

ಕೋಲ್ಕತ್ತಾ, ಆ. 21: ಜವಾಹಾರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಮೇಲೆ ಕೊಳೆತ ಮೊಟ್ಟೆ ಎಸೆಯಲು ಯತ್ನಿಸಿರುವ ಬಿಜೆಪಿ ಕಾರ್ಯಕರ್ತರು, ಅವರನ್ನು ಐಎಸ್ ಭಯೋತ್ಪಾದಕ ಗುಂಪಿನ ಏಜೆಂಟ್ ಹಾಗೂ ದೇಶ ವಿರೋಧಿ ಎಂದು ಜರಿದಿದ್ದಾರೆ.

 ಪಶ್ಚಿಮಬಂಗಾಳದ ಮಿಡ್ನಾಪುರದಲ್ಲಿ ಸುಮಾರು 100ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಪಶ್ಚಿಮ ಮಿಡ್ನಾಪುರದ ಬಿಜೆಪಿ ಕಚೇರಿಯಿಂದ ಘೋಷಣೆಗಳನ್ನು ಕೂಗುತ್ತಾ ರ‍್ಯಾಲಿ ನಡೆಸಿದರು. ಇದೇ ಸಂದರ್ಭ ಕನ್ಹಯ್ಯ ಕುಮಾರ್ ಹಾಗೂ ಅವರ ಬೆಂಬಲಿಗರು ರ‍್ಯಾಲಿ ನಡೆಸಿದ್ದರು. ಎರಡೂ ಗುಂಪುಗಳು ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಬಳಿ ಮುಖಾಮುಖಿಯಾದರು.

 ಭಿತ್ತಿ ಪತ್ರ ಹಾಗೂ ರಾಷ್ಟ್ರಧ್ವಜವನ್ನು ಅತ್ತಿತ್ತ ಬೀಸಿದ ಬಿಜೆಪಿ ಕಾರ್ಯಕರ್ತರು ಕನ್ಹಯ್ಯ ಹಾಗೂ ಬೆಂಬಲಿಗರಿಗೆ, ಹಿಂದೆ ಹೋಗಿ ಹಾಗೂ ಪಾಕಿಸ್ತಾನಕ್ಕೆ ತೆರಳಿ ಎಂದರು. ರ‍್ಯಾಲಿ ಆಯೋಜಿಸಿದ ಸಿಪಿಐಯ ವಿದ್ಯಾರ್ಥಿ ಸಂಘಟನೆ ಎಐಎಸ್‌ಎಫ್ ಕಾರ್ಯಕರ್ತರು ಕೂಡ ಪ್ರತಿಯಾಗಿ ಘೋಷಣೆಗಳನ್ನು ಕೂಗಿದರು. ಆದರೆ, ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ತಡೆದು ಪರಿಸ್ಥಿತಿ ತಹಬಂದಿಗೆ ತಂದರು.

  ಕನ್ಹಯ್ಯ ಸ್ಪೋರ್ಟ್ಸ್ ಕ್ಲಬ್‌ಗೆ ಪ್ರವೇಶಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮೊಟ್ಟೆಗಳನ್ನು ಎಸೆದರು. ಆದರೆ, ಪೊಲೀಸರು ರಕ್ಷಣೆ ಒದಗಿಸಿರುವುದರಿಂದ ಬಿಜೆಪಿ ಕಾರ್ಯಕರ್ತರ ಯತ್ನ ವಿಫಲವಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿ 19 ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News