ಉಡುಪಿ: ತಾಂತ್ರಿಕ ಕಾಲೇಜುಗಳಿಂದ ನೂತನ ಯೋಜನೆ ಪ್ರಸ್ತುತಿ

Update: 2017-08-23 16:41 GMT

ಉಡುಪಿ, ಆ.23: ಸರಕಾರ ಸೃಜನಾತ್ಮಕ ಹಾಗೂ ಪರಿಣಾಮಕಾರಿಯಾದ ಯೋಜನೆಗಳನ್ನು ಸರಕಾರಿ ಇಲಾಖೆಗಳಲ್ಲಿ ಹಾಗೂ ಸಂಸ್ಥೆಗಳಲ್ಲಿ ಜಾರಿಗೆ ತರಲು ಚಾಲೆಂಜ್ ಫಂಡ್ ಯೋಜನೆ ಜಾರಿಗೆ ತಂದಿದ್ದು ಈ ಕುರಿತಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.

 ಪರಿಸರ ಸ್ನೇಹಿಯಾಗಿ, ಸಾರ್ವಜನಿಕರಿಗೆ ಅನುಕೂಲಕರವಾಗಿ ವಿನೂತನ ತಂತ್ರಜ್ಞಾನ ಹೊಂದಿರುವ ಯೋಜನೆಗಳನ್ನು ಜಿಲ್ಲೆಯ ಶ್ರೀಮಾದ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜು, ಮಣಿಪಾಲ ತಾಂತ್ರಿಕ ಕಾಲೇಜು, ಮೂಡ್ಲಕಟ್ಟೆ ತಾಂತ್ರಿಕ ಕಾಲೇಜು ಹಾಗೂ ವಿವಿಧ ಸ್ವಯಂಸೇವಾ ಸಂಘಟನೆಗಳು ಸಿದ್ಧ ಪಡಿಸಿದ್ದು ಈ ಯೋಜನೆಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.

ಬಂಟಕಲ್ಲಿನ ಶ್ರೀಮಾದ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜು ಸಿದ್ದಪಡಿಸಿದ ಉಡುಪಿ ಬಸ್‌ನಿಲ್ದಾಣಗಳ ಯೋಜನಾ ಬದ್ಧ ಅಭಿವೃದ್ಧಿ, ಡ್ರೋಣ್ ಮೂಲಕ ಕೀಟನಾಶಕ ಸಿಂಪಡಣೆ, ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಅನುಕೂಲವಾಗುವ ಯೋಜನೆಗಳು, ಮಣಿಪಾಲ ಎಂಐಟಿ ಸಿದ್ಧಪಡಿಸಿದ ನೀರಿನ ಬಿಲ್ ಆನ್‌ಲೈನ್ ಪಾವತಿ, ಮಹಿಳಾ ಮೀನು ಮಾರಾಟ ಗಾರರಿಗೆ ಅನುಕೂಲವಾಗುವ ಸೌರವಿದ್ಯುತ್‌ನಿಂದ ಕಾರ್ಯನಿರ್ವಹಿಸುವ ಹವಾನಿಯಂತ್ರಿತ ಮೀನು ಶೇಖರಣಾ ಪೆಟ್ಟಿಗೆ (ಕೂಲ್ ಮೀನು) ಯೋಜನೆ, ಸಂಚಾರ ವ್ಯವಸ್ಥೆಗೆ ಬಲ ನೀಡುವ ಯೋಜನೆ, ಬಳಸಿ ಉಳಿಯುವ ಆಹಾರ ಪದಾರ್ಥಗಳ ಸಮರ್ಪಕ ಹಂಚಿಕೆ ಹಾಗೂ ಮೂಡ್ಲಕಟ್ಟೆ ತಾಂತ್ರಿಕ ಕಾಲೇಜು ರೂಪಿಸಿದ್ದ ಶೌಚಾಲಯಗಳಲ್ಲಿ ಬಯೋ ಟಾಯ್ಲೆಟ್ ವ್ಯವಸ್ಥೆ, ಬಯೋ ಗ್ಯಾಸ್ ಘಟಕ, ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಬಹುದಾದ ರಸ್ತೆಗಳ ಕುರಿತ ಯೋಜನೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ, ಇಲ್ಲಿ ಸಲ್ಲಿಸಿರುವ ಯೋಜನೆಗಳನ್ನು ಆಯ್ಕೆ ಮಾಡಿ ಸರಕಾರಕ್ಕೆ ಕಳುಹಿಸಲಾಗುವುದು. ಸರಕಾರದಿಂದ ಅನು ಮೋದನೆ ದೊರಕಿದ ಯೋಜನೆಗಳನ್ನು ಜಿಲ್ಲೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹಾಗೂ ವಿವಿಧ ಕಾಲೇಜುಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News