ಕೇಂದ್ರದಲ್ಲಿರುವುದು ಸರ್ವಾಧಿಕಾರಿ ಸರ್ಕಾರ : ಸವಿತಾ ರಮೇಶ್

Update: 2017-08-28 13:20 GMT

ಪುತ್ತೂರು,ಆ.28: ಮೋದಿ ನೇತೃತದ ಕೇಂದ್ರ ಸರ್ಕಾರಮಾಧ್ಯಮಗಳು ಮತ್ತು ಅಧಿಕಾರಿಗಳನ್ನು ಹತ್ತಿಕ್ಕುವ ಮೂಲಕ ಸರ್ವಾಧಿಕಾರಿ ದೋರಣೆ ನಡೆಸುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಮೋದಿ ಸರ್ಕಾರಕ್ಕೆ ಬುದ್ದಿ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ, ಚಿಕ್ಕಮಗಳೂರಿನ ಸವಿತಾ ರಮೇಶ್ ಹೇಳಿದರು.

ಅವರು ಸೋಮವಾರ ಪುತ್ತೂರು ನಗರ ಕಾಂಗ್ರೆಸ್ ವತಿಯಿಂದ ಇಲ್ಲಿನ ಬಸ್ ನಿಲ್ದಾಣದ ಎದುರು ಕೇಂದ್ರ ಸರಕಾರವ ವಿರುದ್ಧ ಸೋಮವಾರ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಧಿಕಾರ ಪಡೆಯುವ ಸಂದರ್ಭದಲ್ಲಿ ದೇಶದಲ್ಲಿ 15 ರೂಪಾಯಿಗೆ ಪೆಟ್ರೋಲ್ ನೀಡುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ ಈಗ ಪೆಟ್ರೋಲ್ ಬೆಲೆ 70 ರೂ. ದಾಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿದ್ದಾಗಲೂ ಮನಮೋಹನ್ ಸಿಂಗ್ ಸರಕಾರ ಧಾರಣೆ ಏರದಂತೆ ನೋಡಿಕೊಂಡಿತ್ತು. ಆದರೆ ಈಗ ಕಚ್ಚಾತೈಲ ಬೆಲೆ ಗಣನೀಯವಾಗಿ ಇಳಿದಿದ್ದರೂ ನಮ್ಮಲ್ಲಿ ಪೆಟ್ರೋಲ್ ಧಾರಣೆ ಗಗನಕ್ಕೇರಿದೆ. ರೈತರ ಎಲ್ಲ ಬಗೆಯ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದ ಮೋದಿ ಈಗ ಸಾಲ ಮನ್ನಾ ಮಾಡುವುದು ಫ್ಯಾಶನ್ ಎನ್ನುತ್ತಾರೆ ಹಿಂದೆ ಯುಪಿಎ ಸರಕಾರ ಇರುವಾಗ ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಜಿಎಸ್‍ಟಿ ಕರಡು ಮಸೂದೆ ತರಲಾಗಿತ್ತು. ಆಗ ಮೋದಿ ಸೇರಿದಂತೆ ಬಿಜೆಪಿ ನಾಯಕರು ಜಿಎಸ್‍ಟಿ ಬಂದರೆ ದೇಶ ದಿವಾಳಿಯಾಗುತ್ತದೆ  ಎಂದು ಹೇಳಿದ್ದರು.  ಇದೀಗ ಜನಸಾಮಾನ್ಯರಿಗೆ ಹೊರೆಯಾಗುವ ರೀತಿಯಲ್ಲಿ ಜಿಎಸ್‍ಟಿಯನ್ನು ಜಾರಿಗೊಳಿಸಿ ಜನರನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಮಂಜೇಶ್ವರದ ಕಾಂಗ್ರೆಸ್ ಮುಖಂಡ ಮಂಜುನಾಥ ಆಳ್ವ ಮಾತನಾಡಿ, ಹರಿಯಾಣ ಮತ್ತು ಪಂಜಾಬಿನಲ್ಲಿ ನಡೆದ ಹಿಂಸಾಚಾರ ಬಗ್ಗೆ ಚಂಡಿಗಢ ಹೈಕೋರ್ಟ್ ಎಚ್ಚರಿಕೆಯ ಮಾತುಗಳನ್ನಾಡಿದೆ. ನರೇಂದ್ರ ಮೋದಿ ಅವರು ಬಿಜೆಪಿಗೆ ಪ್ರಧಾನಿಯಲ್ಲ, ಇಡೀ ದೇಶಕ್ಕೆ ಪ್ರಧಾನಿ ಎಂದು ಹೇಳಿದೆ. ಇದನ್ನು ನಮ್ಮ ಪ್ರಧಾನಿಯವರು ನೆನಪಿಟ್ಟುಕೊಳ್ಳಲಿ ಎಂದರು.

ಇಂದಿರಾ ಗಾಂಧಿ ಅವರು ತಮ್ಮ ಜೀವದ ಹಂಗು ತೊರೆದು, ತಮ್ಮ ಪಕ್ಷದ ಹಿತಾಸಕ್ತಿಯನ್ನೂ ಗಮನಿಸದೆ ಪಂಜಾಬಿನಲ್ಲಿ ಬ್ಲೂಸ್ಟಾರ್ ಆಪರೇಶನ್ ಮಾಡಿ ಖಾಲೀಸ್ತಾನ ಚಳುವಳಿ ಹತ್ತಿಕ್ಕಿ ದೇಶದ ಸಾರ್ವಭೌಮತೆ ಕಾಪಾಡಿದರು. ಆದರೆ ದೇಶಕ್ಕಿಂತ ಪಕ್ಷದ ಹಿತಾಸಕ್ತಿಯನ್ನೇ ನೋಡುತ್ತಿರುವ ಮೋದಿಯ ನಿಲುವನ್ನು ವಿರೋಧಿಸಿರುವ ಸುಪ್ರಿಂ ಕೋರ್ಟು ನೀವು ಬಿಜೆಪಿ ಪ್ರದಾನಿಯಲ್ಲ ದೇಶದ ಪ್ರದಾನಿ ಎಂದು ಹೇಳಿರುವುದು ಮೋದಿಯ ನೈಜತೆಯನ್ನು ಸೂಚಿಸುತ್ತದೆ ಎಂದು ಆರೋಪಿಸಿದರು.

ಅತ್ಯಾಚಾರಿ ಸ್ವಾಮಿಯನ್ನು ಬಿಜೆಪಿಗರು ಪೂಜೆ ಮಾಡುತ್ತಿದ್ದಾರೆ ಎಂದು ಹೇಳಿದ ಅವರು, ಪ್ರಧಾನಿ ಮೋದಿ ಪ್ರಯಾಣಿಸುವ ವಿಮಾನದಲ್ಲಿ ಬಾಬಾ ರಾಮ್ ರಹೀಂ ಬಾಬಾರನ್ನು ಕೇಂದ್ರ ಸರಕಾರ ಕರೆದುಕೊಂಡು ಹೋಗಿದ್ದನ್ನು ನೋಡಿದರೆ ಪ್ರಧಾನಿಗೆ ನೀಡುವಷ್ಟೇ ಗೌರವವನ್ನು ಅತ್ಯಾಚಾರಿ ಬಾಬಾನಿಗೂ ನೀಡಿದ್ದು ಸಾಬೀತಾಗಿದೆ. ಆಗರ್ಭ ಶ್ರೀಮಂತರಾಗಿದ್ದರೂ ಸರ್ವಸ್ವವನ್ನೂ ದೇಶಕ್ಕಾಗಿ ಅರ್ಪಣೆ ಮಾಡಿದ ನೆಹರೂ ಅವರನ್ನು ಟೀಕಿಸುವ ಬಿಜೆಪಿ ನಮ್ಮ ಮುಂದಿದೆ. ಮೋದಿ ಅವರಿಗೆ ನೆಹರೂ ಹೆಸರು ಹೇಳಲೂ ನಾಚಿಕೆ ಆಗುತ್ತಿದೆ. ದೇಶದ ಸ್ವಾತಂತ್ರ್ಯಕ್ಕೆ ಏನೂ ಕೊಡುಗೆ ನೀಡದ ಬಿಜೆಪಿ, ಬ್ರಿಟಿಷರಿಗೆ ಬೆಂಬಲ ನೀಡಿ ಪತ್ರ ಬರೆದಿದ್ದ ಆರೆಸ್ಸೆಸ್ ನಾಯಕರು ಇದನ್ನೆಲ್ಲ ದೇಶ ಮರೆಯಲು ಸಾಧ್ಯವಿಲ್ಲ ಎಂದರು.

ದೇಶ ಅಪಾರ ಅಭಿವೃದ್ಧಿ ಕಂಡಿದ್ದರೆ ಅದರ ಹಿಂದೆ 60 ವರ್ಷಗಳ ಕಾಂಗ್ರೆಸ್ ಆಡಳಿತದ ಕೊಡುಗೆ ಇದೆ. ಅದನ್ನೆಲ್ಲ ಬಿಜೆಪಿ ಮಾಡಿದ್ದಲ್ಲ ಎಂದು ಹೇಳಿದ ಆಳ್ವಾ, ಹಿಂದೂಗಳ ರಕ್ಷಣೆ ಹೆಸರು ಹೇಳಿಕೊಂಡು ಹಿಂದೂಗಳನ್ನೇ ಕೊಲೆ ಮಾಡಿಸುತ್ತಾರೆ ಎಂದು ಆಪಾದಿಸಿದರು.

ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಸಾಲ ಮನ್ನಾ ಮಾಡುವುದಾಗಿ ಹೇಳಿದ ಮೊದಿ ಒಂದು ಪೈಸೆಯೂ ಮನ್ನಾ ಮಾಡಿಲ್ಲ. ಆದರೆ ಮನ್ನಾ ಭರವಸೆ ನೀಡದೇ ಇದ್ದ ಸಿದ್ಧರಾಮಯ್ಯ ಮಾತ್ರ 50 ಸಾವಿರ ಮನ್ನಾ ಮಾಡಿ ರೈತರ ಕಣ್ಣೀರೊರೆಸಿದ್ದಾರೆ. ಸಿದ್ಧರಾಮಯ್ಯ ಅವರನ್ನು ನಿದ್ರಾಮಯ್ಯ ಎಂದು ಲೇವಡಿ ಮಾಡುವ ಬಿಜೆಪಿಗರು, ಅವರು ಜಾರಿಗೆ ತಂದ ಭಾಗ್ಯಗಳನ್ನು ಲೇವಡಿ ಮಾಡುವ ಬಿಜೆಪಿಗೂ ಒಳಗಿಂದೊಳಗೆ ಸದ್ದಿಲ್ಲದೆ ಆ ಎಲ್ಲ ಯೋಜನೆಗಳ ಪ್ರಯೋಜನ ಪಡೆದುಕೊಂಡಿದ್ದಾರೆ. ಆದರೆ ಬಹಿರಂಗವಾಗಿ ಇದು ಸಿದ್ಧರಾಮಯ್ಯರ ಯೋಜನೆ ಎಂದು ಹೇಳಲು ಹಿಂದೇಟು ಹಾಕುತ್ತಾರೆ. ಇದು ಬಿಜೆಪಿಗರ ಸೋಗಲಾಡಿತನ ಎಂದರು. ಸಿದ್ಧರಾಮಯ್ಯ ಅವರು ತಮ್ಮ ಭಾಗ್ಯ ಯೋಜನೆಗಳಿಂದಲೇ ಜನಪ್ರಿಯರಾಗಿದ್ದು, ಈಗ ಮತ್ತೊಮ್ಮೆ ಕಾಂಗ್ರೆಸ್ ಸರಕಾರ ಬರುತ್ತದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಸ್ವತಃ ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲೂ  ಈ ಅಂಶ ಇದೆಯಂತೆ. ಇದನ್ನೆಲ್ಲ ತಿಳಿದಾಗ ಅಮಿತ್ ಶಾ ಕಂಗೆಟ್ಟಿದ್ದಾರೆ. ಕಾಂಗ್ರೆಸ್ ಸರಕಾರ ನೀಡಿದ ಜನೋಪಯೋಗಿ ಯೋಜನೆಗಳನ್ನು ಜನ ಹೆಮ್ಮೆಯಿಂದ ಹೇಳಿಕೊಳ್ಳಬೇಕು ಎಂದವರು ವಿನಂತಿಸಿದರು.

ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆಯಲ್ಲಿ ಬಂದ ಕಾಂಗ್ರೆಸಿಗರು ಬಸ್ ನಿಲ್ದಾಣದ ಬಳಿಯ ಗಾಂಧಿ ಪ್ರತಿಮೆ ಎದುರು ಜಮಾಯಿಸಿ ಅಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.

ಸಭೆಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ,ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಜಲ್ ರಹೀಂ, ಸುಳ್ಯದ ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವಾ, ಪುತ್ತೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಲ್ಮಾ ಡಿಸೋಜ, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಫಿಕ್, ಪಕ್ಷದ ಮುಖಂಡರಾದ ಮಹೇಶ್ ರೈ ಅಂಕೊತ್ತಿಮಾರ್, ಅಮಳ ರಾಮಚಂದ್ರ, ಜೋಕಿಂ ಡಿಸೋಜ, ಕೃಷ್ಣ ಪ್ರಸಾದ್ ಆಳ್ವಾ, ಉಲ್ಲಾಸ್ ಕೋಟ್ಯಾನ್, ಉಮಾನಾಥ ಶೆಟ್ಟಿ, ಕೌಶಲ್ ಪ್ರಸಾದ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಇಸಾಕ್ ಸಾಲ್ಮರ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News