ಉಡುಪಿ ಮೈನ್ ಶಾಲೆ ದುರಸ್ತಿಗೆ ಆಗ್ರಹಿಸಿ ಮನವಿ
ಉಡುಪಿ, ಆ.29: ನಗರದ ಕವಿ ಮುದ್ದಣ ಮಾರ್ಗದಲ್ಲಿರುವ 131 ವರ್ಷ ಗಳ ಇತಿಹಾಸ ಹೊಂದಿರುವ ಸರಕಾರಿ ಮಹಾತ್ಮಗಾಂಧಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಪಾರ್ಶ್ವದ ಗೋಡೆ ತಿಂಗಳ ಹಿಂದೆ ಕುಸಿದು ಬಿದ್ದಿದ್ದು, ಇದನ್ನು ಕೂಡಲೇ ದುರಸ್ತಿ ಮಾಡುವಂತೆ ಆಗ್ರಹಿಸಿ ವಿವಿಧ ಸಂಘಟನೆ ಗಳು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ.
ಗೋಡೆ ಕುಸಿದ ಕಾರಣದಿಂದ ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳನ್ನು ಸಮೀಪದ ಬೇರೆ ಶಾಲೆಗಳಿಗೆ ಸೆರ್ಪಡೆಗೊಳಿಸಲಾಗಿದೆ. ತಮಗೆ ಇದೇ ಶಾಲೆ ಬೇಕೆಂದು ಇಲ್ಲಿನ ವಿದ್ಯಾರ್ಥಿಗಳು ಹಠ ಹಿಡಿದಿದ್ದಾರೆ. ಆದುದರಿಂದ ಶಾಲೆಯನ್ನು ದುರಸ್ಥಿ ಪಡಿಸಿ ಈ ಮೊದಲಿನಂತೆ ಶಾಲಾ ಚಟುವಟಿಕೆಗಳು ನಡೆಯುವಂತೆ ವ್ಯವಸ್ಥೆಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಶಾಲಾಭಿವೃದ್ಧಿ ಸಮಿತಿ, ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಶಾಲೆಯ ಹಳೆ ವಿದ್ಯಾರ್ಥಿ ಸಂಘ ಜಂಟಿಯಾಗಿ ಜಿಲ್ಲಾಧಿಕಾರಿಗಳಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ-ನಿರ್ದೆಶಕರಿಗೆ ಹಾಗೂ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅವರಿಗೆ ಈ ಮನವಿ ಪತ್ರವನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸಮಾಜ ಸೇವಕ ಶಿರೂರು ತಾರಾನಾಥ್ ಮೇಸ್ತ ಉಪಸ್ಥಿತರಿದ್ದರು.