ಕಾಟಿಪಳ್ಳ: ಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಪಾನೀಯ ವಿತರಿಸಿ ಸೌಹಾರ್ದ ಮೆರೆದರು
ಮಂಗಳೂರು, ಸೆ. 3: ಚೌತಿ ಹಬ್ಬದ ಪ್ರಯುಕ್ತ ಕೃಷ್ಣಾಪುರ ಯುವಕ ಮಂಡಲ 5ನೆ ಬ್ಲಾಕ್ ನ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆ 5ನೆ ಬ್ಲಾಕ್ ನಿಂದ ಕೈಕಂಬವರೆಗೆ ಹೊರಟ ಸಂದರ್ಭ ಕಾಟಿಪಳ್ಳ 2ನೆ ಬ್ಲಾಕ್ ತಲುಪಿದ ವೇಳೆ ಕಾಟಿಪಳ್ಳ ಮುಹಿಯುದ್ದೀನ್ ಜುಮಾ ಮಸೀದಿಯ ಜಮಾಅತ್ ವತಿಯಿಂದ ಮೆರವಣಿಗೆಯಲ್ಲಿದ್ದವರಿಗೆ ತಂಪು ಪಾನೀಯ ನೀಡಿ ಸೌಹಾರ್ದತೆಗೆ ಸಾಕ್ಷಿಯಾದರು.
ರಾತ್ರಿ 8 ಗಂಟೆಯ ಸುಮಾರಿಗೆ ಮಸೀದಿ ಸಮೀಪ ತಲುಪಿದ ಮೆರವಣಿಗೆ ಈ ಸಂದರ್ಭ ರಾತ್ರಿಯ ಅಝಾನ್ ಮೊಳಗಿದ್ದು, ಡಿ.ಜೆ, ಬ್ಯಾಂಡ್ ಶಬ್ದ ಹಾಗು ಭಜನೆಗಳನ್ನು ನಿಲ್ಲಿಸಿ ಅಝಾನ್ ಮುಗಿದ ಬಳಿಕ ಮೆರವಣಿಗೆಯನ್ನು ಮುಂದುವರಿಸಿ ಸೌಹಾರ್ದತೆಗೆ ಸಾಕ್ಷಿಯಾದರು. ಮಸೀದಿಯ ಗೇಟಿನ ಮುಂದೆ ಮೆರವಣಿಗೆ ಹಾದು ಹೋಗುವ ಸಂದರ್ಭ ಜಮಾಅತಿನವರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಶುಭಾಶಯ ತಿಳಿಸಿದರು.
ಈ ಸಂದರ್ಭ ಮಸೀದಿಯ ಉಪಾಧ್ಯಕ್ಷ ಮುಹಮ್ಮದ್ ಶರೀಫ್, ಮಾಜಿ ಕೋಶಾಧಿಕಾರಿ ಅಬೂಬಕರ್(ಅಂಗಡಿ), ಸದಸ್ಯ ಮೋನು ಹಾಗು ಇತರರು ಉಪಸ್ಥಿತರಿದ್ದರು.
ಈ ಕಾರ್ಯವು ಕಳೆದ 8 ವರ್ಷಗಳಿಂದ ನಡೆಯುತ್ತಿದ್ದು ಯಾವುದೇ ಪ್ರಚಾರವಿಲ್ಲದೆ, ಕೋಮುಸೂಕ್ಷ್ಮ ಕಾಟಿಪಳ್ಳ ಪ್ರದೇಶಕ್ಕೆ ಸೌಹಾರ್ದತೆಯ ಕನ್ನಡಿ ಯಾಗಿದೆ. ಪೊಲೀಸ್ ಬಿಗಿ ಭದ್ರತೆಯಿದ್ದರೂ ಕೂಡ ಯಾವುದೇ ಒತ್ತಡಯಿಲ್ಲದೆ ನಿರ್ಭತೆಯಿಂದ ಇರುವುದು ಕಂಡುಬರುತ್ತದೆ.