ಪತ್ರಿಕಾ ಸ್ವಾತಂತ್ರ್ಯದ ದಮನ: ಕ್ಯಾಂಪಸ್ ಫ್ರಂಟ್ ಖಂಡನೆ
Update: 2017-09-08 17:20 IST
ಮಂಗಳೂರು, ಸೆ. 8: ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿಯ ಮನೆಗೆ ಪೊಲೀಸರು ಇತ್ತೀಚೆಗೆ ನಡೆಸಿದ ದಾಳಿಯ ಕುರಿತಂತೆ ವರದಿ ಮಾಡಿದ ಆರೋಪದಲ್ಲಿ ವಾರ್ತಾಭಾರತಿ ಬಂಟ್ವಾಳ ತಾಲೂಕಿನ ವರದಿಗಾರನನ್ನು ಯಾವುದೇ ನೋಟಿಸ್ ನೀಡದೆ ಬಂಟ್ವಾಳ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ ಘಟನೆ ನಡೆದಿದೆ.
ಸಮಾಜದಲ್ಲಿ ನಡೆಯುವ ಹಾಗು-ಹೋಗುಗಳ ಕುರಿತು ಜನತೆಯ ಮುಂದಿಡುವ ಉನ್ನತ ಜವಾಬ್ದಾರಿಯನ್ನು ನಿರ್ವಹಿಸುವ ಪತ್ರಿಕೆಯ ವರದಿಗಾರನನ್ನು ಕಾನೂನಿನ ನಿಯಮವನ್ನು ಉಲ್ಲಂಘಿಸಿ ಬಂಧಿಸಿರುವುದು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನವಾಗಿದ್ದು ಇದು ಖಂಡನೀಯವಾಗಿದೆ ಹಾಗೂ ಪೊಲೀಸ್ ಇಲಾಖೆಯ ತಾರತಮ್ಯ ನೀತಿಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವ ಚಿಂತನೆ ನಡೆಸಲಾಗುವುದು ಎಂದು ಕ್ಯಾಂಪಸ್ ಫ್ರಂಟ್ ಬಂಟ್ವಾಳ ತಾಲೂಕು ಅಧ್ಯಕ್ಷ ನಬೀಲ್ ರಹ್ಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.