ಎದೆನೋವಿನಿಂದ ರೈಲಿನಲ್ಲಿ ಕುಸಿದು ಬಿದ್ದ ಬಾಲಕಿಯ ನೆರವಿಗೆ ಧಾವಿಸಿದ ಜ್ಯೋತಿರಾದಿತ್ಯ ಸಿಂಧ್ಯ
ಆಗ್ರಾ, ಸೆ.10: ರೈಲಿನಲ್ಲಿ ತೆರಳುತ್ತಿದ್ದ ವೇಳೆ ಎದೆನೋವಿನಿಂದ ಅಸ್ವಸ್ತಗೊಂಡ ಬಾಲಕಿಯ ನೆರವಿಗೆ ಧಾವಿಸಿದ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಜ್ಯೋತಿರಾದಿತ್ಯ ಸಿಂಧ್ಯ ಅವರು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ದಿಲ್ಲಿಗೆ ರೈಲಿನಲ್ಲಿ ತೆರಳುತ್ತಿದ್ದ ಸಂದರ್ಭ ಬಾಲಕಿಗೆ ಎದೆನೋವು ಕಂಡು ಕಾಣಿಸಿಕೊಂಡಿತ್ತು. ಕುಸಿದು ಬಿದ್ದ ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ರೈಲ್ವೆ ಮೆಡಿಕಲ್ ಏಜೆನ್ಸಿ ಸರ್ವಿಸ್ನ್ನು ಸಂಪರ್ಕಿಸಲಾಯಿತು. ಆದರೆ ಸೇವೆ ಲಭ್ಯವಿಲ್ಲ ಎಂದು ಅಲ್ಲಿಂದ ಪ್ರತಿಕ್ರಿಯೆ ಸಿಕ್ಕಿತ್ತು. ಈ ಸಂದರ್ಭ ಸಿಂಧ್ಯ ಮಧ್ಯಪ್ರವೇಶಿಸಿ, ಬಾಲಕಿಗೆ ಬೇಕಾದ ವ್ಯವಸ್ಥೆ ಮಾಡಿದರು.
ಸಿಂಧ್ಯರ ಎದುರಿನ ಆಸನದಲ್ಲಿ ಕುಳಿತಿದ್ದ ವಂದನಾ ಎನ್ನುವ ಬಾಲಕಿಗೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಕುಸಿದು ಬಿದ್ದ ಆಕೆಗೆ ನೀಡಲು ತುರ್ತು ವೈದ್ಯಕೀಯ ವ್ಯವಸ್ಥೆಯೂ ಸಿಗಲಿಲ್ಲ. ಈ ಸಂದರ್ಭ ಜ್ಯೋತಿರಾದಿತ್ಯ ಅವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ರೈಲ್ವೆ ವಿಭಾಗೀಯ ಮ್ಯಾನೇಜರ್ರನ್ನು ನೇರವಾಗಿ ಸಂಪರ್ಕಿಸಿದರು. ಸಂಸದರ ಮಧ್ಯಪ್ರವೇಶದಿಂದಾಗಿ ರಾತ್ರಿ 2:30ಕ್ಕೆ ಆ್ಯಂಬುಲೆನ್ಸ್ ಆಗಮಿಸಿತು. ಬಾಲಕಿಯ ಜೊತೆಗೆ ಸಂಸದರೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ಬೇಕಾದ ಸೂಚನೆಗಳನ್ನು ನೀಡಿದರು.