ಕಾಶ್ಮೀರ:ರಾಜನಾಥ್ ಭೇಟಿಯ ವಿರುದ್ಧ ಪ್ರತ್ಯೇಕತಾವಾದಿ ಗುಂಪುಗಳಿಂದ ಮುಷ್ಕರ
Update: 2017-09-10 19:10 IST
ಶ್ರೀನಗರ,ಸೆ.10: ಪ್ರತ್ಯೇಕತಾವಾದಿ ಗುಂಪುಗಳು ಕೇಂದ್ರ ಗೃಹಸಚಿವ ರಾಜನಾಥ ಸಿಂಗ್ ಅವರ ಭೇಟಿಯ ವಿರುದ್ಧ ಮುಷ್ಕರಕ್ಕೆ ಕರೆ ನೀಡಿದ್ದರಿಂದ ರವಿವಾರ ಕಾಶ್ಮೀರದಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಶ್ರೀನಗರದಲ್ಲಿ ನಿರ್ಬಂಧಗಳನ್ನು ಸತತ ಎರಡನೇ ದಿನವೂ ಮುಂದುವರಿಸಿದ್ದರು.
ಹೆಚ್ಚಿನ ಸಾರ್ವಜನಿಕ ಸಾರಿಗೆ ವಾಹನಗಳು ರಸ್ತೆಗಿಳಿದಿರಲಿಲ್ಲ. ನಗರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಕೆಲವು ವಾಹನಗಳು ಸಂಚರಿಸುತ್ತಿದ್ದುದು ಕಂಡು ಬಂದಿತ್ತು.
ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಅಲಿ ಗೀಲಾನಿ, ಮಿರ್ವೈಝ್ ಉಮರ್ ಫಾರೂಕ್ ಮತ್ತು ಮುಹಮ್ಮದ್ ಯಾಸಿನ್ ಮಲ್ಲಿಕ್ ಅವರು ಕರೆ ನೀಡಿದ್ದ ಮುಷ್ಕರದಿಂದಾಗಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು.
ತನ್ಮಧ್ಯೆ ಶ್ರೀನಗರದ ಆರು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಲಂ 114ರನ್ವಯ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.