ಲಾರಿ ಪಲ್ಟಿ: ಚಾಲಕ ಮೃತ್ಯು
ಬಂಟ್ವಾಳ, ಸೆ. 12: ಎದುರಿಗೆ ಬಂದ ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ತಪ್ಪಿದ ಲಾರಿಯೊಂದು ಪಲ್ಟಿಯಾದ ಪರಿಣಾಮ ಚಾಲಕ ಗಾಯಗೊಂಡು ಮೃತಪಟ್ಟ ಘಟನೆ ಕಲ್ಲಡ್ಕದ ದಾಸಕೋಡಿ ಎಂಬಲ್ಲಿ ಇಂದು ನಡೆದಿದೆ.
ಪುತ್ತೂರು, ನೆಲ್ಯಾಡಿ ನಿವಾಸಿ ಸುರೇಶ್ (45) ಮೃತ ಲಾರಿ ಚಾಲಕ ಎಂದು ಗುರುತಿಸಲಾಗಿದೆ. ಕ್ಲೀನರ್ ಹೆಬ್ರಿ ನಿವಾಸಿ ಗುರುದತ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಣಿಯಿಂದ ಮೆಲ್ಕಾರ್ ಕಡೆಗೆ ಪ್ರಯಾಣಿಸುತ್ತಿದ್ದ ಲಾರಿಗೆ ನೀರಪಾದೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಅಡ್ಡವಾಗಿ ಧಾವಿಸಿದ್ದು, ಇದನ್ನು ತಪ್ಪಿಸಲು ಹೋದ ಲಾರಿ ಪಲ್ಟಿಯಾಯಿತು. ಲಾರಿಯಿಂದ ಎಸೆಯಲ್ಪಟ್ಟ ಲಾರಿ ಚಾಲಕ ಗಾಯಗೊಂಡ ಸುರೇಶರನ್ನು ಬಿ.ಸಿ.ರೋಡ್ ನ್ಯಾಯಾಲಾಯಕ್ಕೆ ಬರುತ್ತಿದ್ದ ಉಪ್ಪಿನಂಗಡಿ ಎಸೈ ನಂದಕುಮಾರ್ ಅವರು, ತಮ್ಮ ಜೀಪಿನಲ್ಲಿ ಹಾಕಿಕೊಂಡು ಬಿ.ಸಿ.ರೋಡ್ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಾಲಕ ಸುರೇಶ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಸಮೀಪದ ಡಿವೈಡರ್ಗೆ ಢಿಕ್ಕಿಯಾಗಿದ್ದು, ದ್ವಿಚಕ್ರ ಸವಾರ ಅದೃಷ್ಟ ವಶಾತ್ ಪಾರಾಗಿದ್ದಾರೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.