×
Ad

ಪೊಳಲಿ ರಾಜರಾಜೇಶ್ವರಿ ದೇವಳದಲ್ಲಿ ಶಾಸನ ಪತ್ತೆ

Update: 2017-09-16 23:45 IST

ಮೂಡುಬಿದಿರೆ, ಸೆ.16 : ಜಿಲ್ಲೆಯ ಇತಿಹಾಸ ಪ್ರಸಿದ್ಧ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಳದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದ ಸಂದಂರ್ಭದಲ್ಲಿ ಶಿಲಾಶಾಸವೊಂದು ಪತ್ತೆಯಾಗಿದ್ದು, ಈ ಶಾಸನವನ್ನು ಪರಿಶೀಲಿಸಿ ಇತಿಹಾಸ ಸಂಶೋಧಕ ಡಾ. ಪುಂಡಿಕಾ ಗಣಪಯ್ಯ ಭಟ್ಟ ಅವರು ಅಧ್ಯಯನ ಮಾಡಿದ್ದಾರೆ.

ದೇವಾಲಯದ ಗರ್ಭಗೃಹದ ಹೊರಗೆ ಎಡಭಾಗದಲ್ಲಿ ಪತ್ತೆಯಾದ ಈ ಶಾಸನ ಫಲಕದ ಹಿಂಭಾಗವನ್ನು ಲೋಹದ ದೇವಾತಾ ವಿಗ್ರಹಗಳನ್ನು ನಿತ್ಯಾಭಿಷೇಕ ಮಾಡುವ ಪೀಠವಾಗಿ ಬಳಸಲಾಗುತ್ತಿತ್ತು. ಈ ಶಾಸನವಲ್ಲದೆ ಜೀರ್ಣೋದ್ಧಾರ ಕಾಮಗಾರಿಗಳ ಸಂದರ್ಭ ಶಾಸನ ರಹಿತವಾದ ಮೂರು ವೀರಗಲ್ಲುಗಳೂ ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಸುಂದರವಾಗಿ ರೂಪಿಸಲಾದ ಈ ಶಿಲಾಫಲಕದಲ್ಲಿ ಅಕ್ಷರಗಳನ್ನು 20 ಸಾಲುಗಳಲ್ಲಿ ಅತ್ಯಂತ ಸ್ಪುಟವಾಗಿ ಕೆತ್ತಲಾಗಿದೆ. ಶಾಸನ ಫಲಕದ ತಳಭಾಗದಲ್ಲಿ ಎರಡು ಸಿಂಹಗಳ ನಡುವಿನಲ್ಲಿ ಒರ್ವ ವ್ಯಕ್ತಿಯು ರಾಜಭಂಗಿಯಲ್ಲಿ ಸ್ತ್ರೀಯೊಂದಿಗೆ ಆಸೀನನಾಗಿರುವ ಚಿತ್ರಣವಿದೆ.

ಶಾಸನದ ಬರಹವಿರುವ ಭಾಗದ ಮಧ್ಯಭಾಗದಲ್ಲಿ ಯಾವುದೋ ಕಾರಣಕ್ಕಾಗಿ ಕಲ್ಲಿನ ಚೆಕ್ಕೆಗಳನ್ನು ವೃತ್ತಾಕಾರವಾಗಿ ಕೆತ್ತಿತೆಗೆಯಲಾಗಿದ್ದು ಇದರಿಂದಾಗಿ ಕೆಲವು ಮಹತ್ವದ ಅಕ್ಷರಗಳು ನಾಶಗೊಂಡಿರುವುದಾಗಿ ಇತಿಹಾಸ ತಜ್ಞ ಡಾ. ಪುಂಡಿಕಾ ಗಣಪಯ್ಯ ಭಟ್ಟ ಅವರು ಅಭಿಪ್ರಾಯಪಟ್ಟಿದ್ದಾರೆ. 

ಸ್ವಸ್ತಿ ಶ್ರೀ ಗಣಪತಯೇ ನಮ: ಎಂದು ಆರಂಭವಾಗುವ ಶಾಸನದ ಎರಡನೆಯ ಸಾಲಿನ ಕೊನೆಯಲ್ಲಿರುವ 1039 ಎಂಬ ಸಂಖ್ಯೆಯನ್ನು ಶಕ ವರ್ಷವೆಂದು ಪರಿಗಣಿಸುವುದು ಸೂಕ್ತವಾಗಿದ್ದು ಅದರಂತೆ ಈ ಶಾಸನದ ಕಾಲ ಕ್ರಿ.ಶ.1117 ಕ್ಕೆ ಸರಿಹೊಂದುತ್ತದೆ ಎಂದು ಗಣಪಯ್ಯ ಭಟ್ ಹೇಳುತ್ತಾರೆ.

ಆಳುಪ ವಂಶದ ಅರಸನಾದ ಕುಲಶೇಖರನ ಆಳ್ವಿಕೆಯಲ್ಲಿ, ಆತನ ಭೃತ್ಯನಾಗಿದ್ದ ಬಿಳಿವೆಯ ನಂಬಿ ಎಂಬಾತ ಆತ್ಮಾರ್ಪಣೆಯನ್ನು (ಜೋಳವಾಳಿ) ಮಾಡಿ ವೀರಸಾಹಸವನ್ನು ಮೆರೆದ ವಿಚಾರವನ್ನು ಈ ಶಾಸನ ದಾಖಲಿಸುತ್ತದೆ. ಶಾಸನದ 14 ನೇ ಸಾಲಿನಲ್ಲಿ ಪಾಂಡ್ಯ ಪಟ್ಟಿಗ (ದೇವ) ಎಂಬ ಹೆಸರಿನ ಉಲ್ಲೇಖವಿದ್ದು ಇದು ಅರಸನಾದ ಕುಲಶೇಖರನ ಬಿರುದು ಅಥವಾ ಉಪನಾಮವೆಂದು ಪರಿಗಣಿಸಬಹುದು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಶಾಸನದಲ್ಲಿ ಬರುವ ಆಳ್ವಖೇಡಮರುಸಾಸಿರ ಎಂಬ ಉಲ್ಲೇಖ ಅತ್ಯಂತ ಮಹತ್ವದ್ದು. ತುಳುನಾಡನ್ನು ಆಳ್ವಖೇಡ ಆರುಸಾವಿರ ಎಂಬ ಹೆಸರಿನಿಂದ ಗುರುತಿಸುವ ಕೆಲವು ಶಾಸನಗಳು ತುಳುನಾಡಿನ ಹೊರಭಾಗದ ಜಿಲ್ಲೆಗಳಲ್ಲಷ್ಟೆ ಈತನಕ ಕಂಡುಬಂದಿದ್ದು, ಪ್ರಸ್ತುತ ಶಾಸನ ಹೊರತುಪಡಿಸಿದರೆ ತುಳುನಾಡಿನ ಒಳಗೆ ಈತನಕ ಪತ್ತೆಯಾದ ಯಾವುದೇ ಶಾಸನದಲ್ಲೂ ಈ ರೀತಿಯ ಉಲ್ಲೇಖ ಕಂಡುಬಂದಿಲ್ಲ ಎಂಬುದು ಈ ಶಾಸನದ ಐತಿಹಾಸಿಕ ಮಹತ್ವವನ್ನು ಎತ್ತಿಹಿಡಿಯುವ ಅಂಶ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಪೊಳಲಿಯಲ್ಲಿ ಬೆಳಕಿಗೆ ಬಂದಿರುವ ಕುಲಶೇಖರ ಪಾಂಡ್ಯ ಪಟ್ಟಿಗ ಶಾಸನವು ಆಳುಪಯುಗದ ತುಳುನಾಡಿನ ಇತಿಹಾಸದ ಒಂದು ಮಹತ್ವಪೂರ್ಣ ದಾಖಲೆ ಎಂದು ಅಬಿಪ್ರಾಯಪಡುವ ಡಾ ಗಣಪಯ್ಯ ಭಟ್ಟರವರಿಗೆ ಈ ಶಾಸನವನ್ನು ಓದಿ ಅರ್ಥೈಸುವಲ್ಲಿ ಸಂಶೋಧಕ ಚಿತ್ರದುರ್ಗದ ಡಾ ಬಿ.ರಾಜಶೇಖರಪ್ಪ ಅವರ ಸಹಕಾರ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News