ಸಂತ್ರಸ್ತ ಕನ್ನಡಿಗರು ಸುರಕ್ಷಿತ
ಮಂಗಳೂರು, ಸೆ.18: ನೆದರ್ಲೆಂಡ್ ಸೆಂಟ್ ಮಾರ್ಟಿನ್ ದ್ವೀಪವು ಇರ್ಮಾ ಚಂಡಮಾರುತಕ್ಕೆ ತುತ್ತಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಈ ಸಂದರ್ಭದಲ್ಲಿ 20 ಮಂದಿ ಕನ್ನಡಿಗರು ಈ ಅವಗಡದಲ್ಲಿ ಸಿಲುಕಿರುವ ಮಾಹಿತಿಯು ನಮ್ಮ ಇಲಾಖೆಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೂಡಲೆ ನೆದರ್ಲೆಂಡ್ನ ಭಾರತ್ ರಾಯಭಾರಿಗಳೊಂದಿಗೆ ಚರ್ಚಿಸಿ ಸಂತ್ರಸ್ತ ಕನ್ನಡಿಗರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದು ಅವರಿಗೆ ಅನುಕೂಲ ಮಾಡಿಕೊಡಲು ಮನವಿ ಮಾಡಿಕೊಳ್ಳಲಾಗಿತ್ತು.
ಅದಕ್ಕೆ ಸ್ಪಂದಿಸಿದ ರಾಯಭಾರಿ ಕಛೇರಿಯು ಸದರಿ ಸಂತ್ರಸ್ತರು ಇರುವ ಸ್ಥಳದಲ್ಲಿಯೇ ಸುರಕ್ಷಿತವಾಗಿದ್ದು, ಯಾವುದೇ ರೀತಿಯ ಸಮಸ್ಯೆ ಅಥವಾ ಜೀವಹಾನಿಗೆ ಗುರಿಯಾಗಿಲ್ಲವೆಂದು ಹಾಗೂ ನೆದರ್ಲೆಂಡ್ನ ಸರಕಾರವು ಎಲ್ಲಾ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಬೋಯಿಂಗ್-747 ವಿಮಾನವನ್ನು ಸೆ.16 ರಂದು ಕಳುಹಿಸಿದ್ದು ಈಗಾಗಲೇ ಬಹಳಷ್ಟು ಜನರನ್ನು ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ ಎಂದು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.