100 ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ವಿತರಣೆ
ಉಡುಪಿ, ಸೆ.19: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ವಿತರಣಾ ಸಮಾರಂಭವು ಮಂಗಳವಾರ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಜರಗಿತು.
ಸಮಾರಂಭವನ್ನು ಉದ್ಘಾಟಿಸಿದ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಕೇಂದ್ರ ಸರಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದಾಗಿ ಗ್ರಾಮೀಣ ಮಹಿಳೆಯರ ಬದುಕು ಹಸನಾಗಿದೆ. ಗ್ರಾಮೀಣ ಮಹಿಳೆಯರು ಅಡುಗೆ ತಯಾರಿಗಾಗಿ ಹಿಂದಿನ ಹಳೆಯ ಇಂಧನ ವಿಧಾನಗಳನ್ನು ಬಳಸುತ್ತಿದ್ದು, ಇದರಿಂದ ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಾಗುತ್ತಿತ್ತು. ಇದರಿಂದ ಅವರನ್ನು ಹಾಗೂ ಪರಿಸರವನ್ನು ರಕ್ಷಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಈ ಯೋಜನೆಯಿಂದಾಗಿ ಗ್ರಾಮೀಣ ಕುಟುಂಬಗಳಿಗೆ ಉಚಿತ ಎಲ್ಪಿಜಿ ಸಂಪರ್ಕ ಒದಗಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅಂಬಲಪಾಡಿ, ಕಡೆಕಾರ್ ಸೇರಿದಂತೆ ವಿವಿಧ ಗ್ರಾಮ ಗಳ 100 ಮಂದಿಗೆ ಉಚಿತ ಗ್ಯಾಸ್ಗಳನ್ನು ವಿತರಿಸಲಾಯಿತು. ಅಧ್ಯಕ್ಷತೆಯನ್ನು ಕಿದಿಯೂರು ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ವಹಿಸಿದ್ದರು.
ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಸದಸ್ಯೆ ಶಿಲ್ಪಾರವೀಂದ್ರ ಕೋಟ್ಯಾನ್, ಅಂಬಲಪಾಡಿ ಗ್ರಾಪಂ ಅಧ್ಯಕ್ಷ ಪ್ರಮೋದ್ ಸಾಲಿಯಾನ್, ಪ್ರಭಾಕರ ಪೂಜಾರಿ, ಗ್ಯಾಸ್ ಏಜೆನ್ಸಿಯ ದಯಾನಂದ್, ರಾಮ್ರಾಜ್ ಕಿದಿ ಯೂರು ಉಪಸ್ಥಿತರಿದ್ದರು. ರಿಕೇಶ್ ಪಾಲನ್ ಸ್ವಾಗತಿಸಿದರು. ಕಿರಣ್ ಕಡೆಕಾರ್ ವಂದಿಸಿದರು. ವಿಕಾಸ್ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.