ಸೀತಾನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
Update: 2017-09-19 17:35 GMT
ಬ್ರಹ್ಮಾವರ, ಸೆ.19: 70ರ ಹರೆಯದ ವೃದ್ಧರೊಬ್ಬರು ಬಾರಕೂರು ಸೇತುವೆ ಮೇಲಿನಿಂದ ಸೀತಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.19ರಂದು ಬೆಳಗ್ಗೆ 9:45ರ ಸುಮಾರಿಗೆ ನಡೆದಿದೆ.
ಮೃತರನ್ನು ಬ್ರಹ್ಮಾವರ ಸಮೀಪದ ಕುಮ್ರಗೋಡು ನಿವಾಸಿ ಸುಧಾಕರ ಶೆಟ್ಟಿ (70) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಬಾರಕೂರು ಸೇತುವೆಯ ಮೇಲೆ ನಡೆದು ಬಂದ ಅವರು ಎಲ್ಲರು ನೋಡನೋಡುತಿದ್ದಂತೆ ಚಪ್ಪಲಿಯನ್ನು ಸೇತುವೆ ಮೇಲೆ ಬಿಟ್ಟು ಹೊಳೆಗೆ ಹಾರಿ ನಾಪತ್ತೆಯಾಗಿದ್ದರು.
ಪ್ಯಾಂಟ್ ಹಾಗೂ ಶರ್ಟ್ ಧರಿಸಿದ್ದ ವ್ಯಕ್ತಿ ಹೊಳೆಗೆ ಹಾರುವುದನ್ನು ಸ್ಥಳೀಯರಾದ ಗಣೇಶ್ ಎಂಬವರು ನೋಡಿದ್ದು, ಕೂಡಲೇ ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕದವರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ್ದು ಸಂಜೆ ವೇಳೆ ಶವ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣಗಳು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.