ಉ.ಪ್ರ: ಕಳ್ಳಭಟ್ಟಿ ಸೇವನೆಯಿಂದ ಸಾವು ಸಂಭವಿಸಿದರೆ ತಯಾರಕರಿಗೆ ಮರಣದಂಡನೆ!
Update: 2017-09-20 19:22 IST
ಲಕ್ನೋ,ಸೆ.20: ಕಳ್ಳಭಟ್ಟಿ ತಯಾರಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಉತ್ತರ ಪ್ರದೇಶ ಸರಕಾರವು, ಕಳ್ಳಭಟ್ಟಿ ಸೇವನೆಯಂದ ಸಾವುಗಳು ಸಂಭವಿಸಿದರೆ ಅಥವಾ ಶಾಶ್ವತ ಅಂಗವಿಕಲತೆ ಉಂಟಾದರೆ ತಯಾರಕರಿಗೆ ಮರಣ ದಂಡನೆಯನ್ನು ವಿಧಿಸಲು ಅಬಕಾರಿ ಕಾಯ್ದೆಯಲ್ಲಿ ನೂತನ ಕಲಂ ಸೇರಿಸಲು ನಿರ್ಧರಿಸಿದೆ.
ಮುಖ್ಯಮಂತ್ರಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಕಳ್ಳಭಟ್ಟಿ ತಯಾರಕರಿಗೆ ಜೀವಾವಧಿ ಶಿಕ್ಷೆ ಅಥವಾ 10 ಲ.ರೂ.ದಂಡ ಅಥವಾ ಎರಡನ್ನೂ ಅಥವಾ ಮರಣದಂಡನೆಯನ್ನು ವಿಧಿಸಲು ಸುಗ್ರೀವಾಜ್ಞೆಯ ಮೂಲಕ ಹಾಲಿ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗುವದು ಎಂದು ಅದು ತಿಳಿಸಿದೆ.
ಇದಕ್ಕಾಗಿ ಸರಕಾರವು ಉತ್ತರ ಪ್ರದೇಶ ಅಬಕಾರಿ ಕಾಯ್ದೆ, 2010ರ ವಿವಿಧ ಕಲಮ್ಗಳಿಗೆ ತಿದ್ದುಪಡಿಗಳನ್ನು ತರಲಿದೆ ಮತ್ತು ನೂತನ ಕಲಂ 60(ಎ)ಅನ್ನು ಸೇರ್ಪಡೆಗೊಳಿಸಲಿದೆ.