ಗಿಡ ನೆಡುವುದು ಪರಿಸರದ ಋಣ ತೀರಿಸುವ ಕೆಲಸ: ಜಯಂತ ಕಾಯ್ಕಿಣಿ
Update: 2017-09-21 21:01 IST
ಉಡುಪಿ, ಸೆ.21: ಗಿಡ ನೆಡುವುದು ಅತ್ಯಂತ ಸಮಾಧಾನಕರವಾದ ಕೆಲಸ. ಇದು ಪರಿಸರದ ಋಣ ತೀರಿಸುವ ಕೆಲಸ. ಗಿಡ ನೆಟ್ಟು ಪೋಷಿಸುವುದು ಮಗು ಬೆಳೆಸಿದಂತೆ. ಇದು ದೇವರ ಪೂಜೆಗಿಂತ ಮಿಗಿಲಾದದ್ದು ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದ್ದಾರೆ.
ಉಡುಪಿಯ ನಮ್ಮ ಮನೆ ನಮ್ಮ ಮರ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಕುಂಜಿಬೆಟ್ಟುವಿನ ಮನೆಯೊಂದರ ಆವರಣದಲ್ಲಿ ಆಯೋಜಿಸಿದ ಗಿಡ ನೆಡುವ ಕಾರ್ಯಕ್ರಮದಲ್ಲಿ ಕೆಂಪು ಜಾಮ್, ಲಕ್ಷ್ಮಣ ಫಲ ಮತ್ತು ಮಾವಿನ ಗಿಡ ನೆಟ್ಟು ಅವರು ಮಾತನಾಡುತಿದ್ದರು.
ಪ್ರತಿಯೊಂದು ಗಿಡದಲ್ಲಿ ಬದುಕಿನ ಸೌಂದರ್ಯ ಮತ್ತು ದೈವತ್ವ ಕಾಣ ಬಹುದು. ಪ್ರಕೃತಿಯಿಂದ ಜೀವನದ ಮಮತೆ ಹಾಗೂ ಸಮತೆಯ ಪಾಠ ಕಲಿಯಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರಾಜೇಶ್ ಭಟ್, ಉರಗ ತಜ್ಞ ಗುರುರಾಜ ಸನಿಲ್, ರವಿರಾಜ ಎಚ್.ಪಿ, ಅವಿನಾಶ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.