ಪೊಲೀಸ್ ಇಲಾಖೆಗೆ ಅಪಮಾನ ಮಾಡಿದರೂ ಉಸ್ತುವಾರಿ ಸಚಿವ, ಶಾಸಕಿ ಮೌನಾಚರಣೆ- ಜೆಡಿಎಸ್ ಆರೋಪ

Update: 2017-09-22 18:00 GMT

ಪುತ್ತೂರು, ಸೆ. 22: ಪೊಲೀಸ್ ಇಲಾಖೆಯ ಅಧಿಕಾರಿಗಳ ಮೇಲೆ ನಡೆದ ಅಪಮಾನದ ವಿರುದ್ಧ ಪೊಲೀಸ್ ಕುಟುಂಬಗಳು ವಿರೋಧ ವ್ಯಕ್ತಪಡಿಸದೇ ಇರುವುದು, ಪರವೂರಿನಿಂದ ಬಂದು ಜಿಲ್ಲೆಯ ಶಾಂತಿ ಕದಡುವ ವ್ಯಕ್ತಿಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪುತ್ತೂರಿನ ಶಾಸಕಿಯವರು ಮೌನಾಚರಣೆ ಮಾಡುತ್ತಿರುವುದು ಬುದ್ಧಿವಂತರ ನಾಡು ಎಂಬ ಹೆಗ್ಗಳಿಕೆ ಪಾತ್ರವಾದ ದಕ್ಷಿಣಕನ್ನಡ ಜಿಲ್ಲೆಗೆ ಹೇಳಿ ಮಾಡಿಸಿದಂತಹ ವಿಚಾರವಲ್ಲ ಎಂದು ಪುತ್ತೂರು ತಾಲೂಕು ಜೆಡಿಎಸ್ ಸಮಿತಿಯ ಮಾಜಿ ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಅವರು ಹೇಳಿದರು.

ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಂತಿಯುತ ನಾಡಿನಲ್ಲಿ ಅಶಾಂತಿ ನಿರ್ಮಿಸುವ ಉದ್ದೇಶದಿಂದ ಬಿಜೆಪಿ ಪಕ್ಷ ನಡೆಸುತ್ತಿರುವ ಹುನ್ನಾರ ಇದಾಗಿದ್ದು, ಚುನಾವಣೆಯ ಹಿನ್ನಲೆಯಲ್ಲಿ ನಡೆಯುತ್ತಿರುವ ಈ ಷಡ್ಯಂತ್ರದ ಬಗ್ಗೆ ಜನತೆ ಎಚ್ಚರವಹಿಸಬೇಕು ಎಂದರು.

ಪರವೂರಿನಿಂದ ಬಂದು ಇಂತಹ ಕೀಳು ಮಟ್ಟದ ಭಾಷೆಯನ್ನು ಉಪಯೋಗಿಸಿ ಉಗ್ರ ಭಾಷಣ ಮಾಡುವ ಯಾವುದೇ ಧರ್ಮದ ವ್ಯಕ್ತಿಗಳಿಗೂ ಜಿಲ್ಲೆಗೆ ಪ್ರವೇಶ ನೀಡಬಾರದು ಎಂದು ಆಗ್ರಹಿಸಿದ ಅವರು ಗಡಿಯಲ್ಲಿ ದೇಶ ಕಾಯುವ ಸೈನಿಕರಂತೆ ನಾಡನ್ನು ಕಾಯುವ ಪೊಲೀಸರು ಕೂಡಾ ಯೋಧರೇ ಆಗಿದ್ದು, ಇವರಿಗೆ ಅವ್ಯಾಚ್ಛ ಶಬ್ದಗಳಿಂದ ಬೈಯ್ಯುವ ಹಾಗೂ ಅಪಮಾನ ಮಾಡುವುದು ದೇಶದ್ರೋಹದಂತಹ ಕೆಲಸವಾಗಿದೆ. ಇವರಿಗೂ ಕುಟುಂಬಗಳಿವೆ. ಈ ಕುಟುಂಬದ ಮಂದಿಗೆ ನೋವು ತರುವ ಕೆಲಸವನ್ನು ಮಾಡುವುದು ಅಪರಾಧವೇ ಆಗಿದೆ ಎಂದು ಅವರು ಹೇಳಿದರು. 

ಮುಂಬರುವ ಚುನಾವಣೆಯನ್ನು ಎದುರಿಸಲು ಬಿಜೆಪಿ ಪಕ್ಷಕ್ಕೆ ಯಾವುದೇ ವಿಚಾರಗಳಿಲ್ಲ. ಹಾಗಾಗಿ ಜನತೆಯ ಮಧ್ಯೆ ವಿಷ ಬೀಜ ಬಿತ್ತುವ ಹಾಗೂ ಕೋಮುಭಾವನೆ ಕೆರಳಿಸುವ ಕೆಲಸಗಳನ್ನು ತನ್ನ ವಿವಿಧ ಸಂಘಟನೆಗಳ ಮೂಲಕ ಬಿಜೆಪಿ ನಡೆಸುತ್ತಿದೆ. ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಜಗದೀಶ್ ಕಾರಂತ ಎಂಬ ಮನೋರೋಗಿಯನ್ನು ಜಿಲ್ಲೆಗೆ ಕರೆತಂದು ವಾಚಾಮಗೋಚರವಾಗಿ ಕೀಳು ಭಾಷೆಯಿಂದ ಭಾಷಣ ಮಾಡಿಸುವುದು ನಾಡಿನ ಹಿತದೃಷ್ಟಿಯಿಂದ ಉತ್ತಮವಾದ ಕೆಲಸವಲ್ಲ. ಜಿಲ್ಲೆಯ ಜನತೆ ಯಾವತ್ತಿಗೂ ಸೌಹಾರ್ದತೆಯನ್ನು ಬಯಸುವವರಾಗಿದ್ದು, ಪೊಲೀಸ್ ಇಲಾಖೆ ಯಾರು ತಪ್ಪು ಮಾಡುತ್ತಾರೋ ಅವರನ್ನು ಬಂಧಿಸಿ ಶಿಕ್ಷೆ ನೀಡುತ್ತದೆ ಎಂದರು. ಆದರೆ ಇಂಥವರನ್ನು ಬಂಧಿಸಿ ಎಂದು ನಿರ್ದೇಶನ ನೀಡುವ ಹಕ್ಕು ಸಂಘಪರಿವಾರಕ್ಕೆ ಯಾರು ಕೊಟ್ಟದ್ದು ಎಂದು ಪ್ರಶ್ನಿಸಿದ ಅವರು ತಪ್ಪು ಮಾಡಿದ ಮಂದಿಯನ್ನು ಧರ್ಮ, ಜಾತಿ ನೋಡದೆ ಶಿಕ್ಷಿಸಿಬೇಕು. ಇದಕ್ಕೆ ಯಾರೂ ಆಕ್ಷೇಪಣೆ ಮಾಡಲಾರರು. ಆದರೆ ವಿನಾ ಕಾರಣ ಸಂಪ್ಯ ಠಾಣಾ ಎಸ್.ಐ ಖಾದರ್, ರುಕ್ಮಾ, ಚಂದ್ರ ನಂತವರ ಮೇಲೆ ಅಪಮಾನ ಮಾಡುವುದು ಸರಿಯಲ್ಲ. ಇವರು ತಪ್ಪು ಮಾಡಿದ್ದರೆ, ಇವರ ಮೇಲೆ ಕಾನೂನು ಪ್ರಕಾರವೇ ಕ್ರಮಕೈಗೊಳ್ಳಲು ಮುಂದಾಗಬೇಕು. ಇದಕ್ಕೆ ಎಲ್ಲರ ಬೆಂಬಲವೂ ದೊರೆಯುತ್ತದೆ ಎಂದವರು ಹೇಳಿದರು.

ಹಿಂದೂ ಧರ್ಮವನ್ನು ಸಂಘಟಿತವನ್ನಾಗಿಸುವ ಹಕ್ಕು ಹಿಂದೂ ಸಂಘಟನೆಗಳಿವೆ. ಆದರೆ ಹಿಂದೂ ಧರ್ಮದ ಎಷ್ಟೋ ಮಂದಿ ಹೆಣ್ಣು ಮಕ್ಕಳು ವಿವಾಹವಾಗದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಎಷ್ಟೋ ಮಂದಿಗೆ ವಾಸಿಸಲು ಮನೆ ಇಲ್ಲ. ಹಿಂದೂ ಧರ್ಮದ ನಿರುದ್ಯೋಗ,ಅಂಗವಿಕಲರ ಸಮಸ್ಯೆ ಮೊದಲಾದ ವಿಚಾರಗಳ ಬಗ್ಗೆ ಮಾತನಾಡಲು ಎಂದಾದರೂ ಜಗದೀಶ್ ಕಾರಂತ ಅವರು ಬಂದಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ಕೇವಲ ಅನ್ಯಧರ್ಮೀಯರಿಗೆ ಹಾಗೂ ಪೊಲೀಸ್ ಇಲಾಖೆಗಳಿಗೆ ಅಪಮಾನ ಮಾಡುವ ಕೆಲಸಕ್ಕೆ ಮಾತ್ರ ಇವರು ಹಾಜರಾಗುತ್ತಾರೆ ಎಂದು ಹೇಳಿದರು.

ಪುತ್ತೂರು ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಫ್ ಕೊಟ್ಯಾಡಿ, ಉಪಾಧ್ಯಕ್ಷ ಪಿ.ಎಂ.ಇಬ್ರಾಹಿಂ ಪರ್ಪುಂಜ, ನಗರ ಜೆಡಿಎಸ್ ಪ್ರಾಧಾನ ಕಾರ್ಯದರ್ಶಿ ವಿಕ್ಟರ್ ಗೊನ್ಸಾಲಿಸ್ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News