ವಾಹನಗಳಿಗೆ ನಕಲಿ ದಾಖಲೆ, ಹಣಕಾಸು ಸಂಸ್ಥೆಗಳಿಗೆ ವಂಚನೆಯ ಜಾಲ ಪತ್ತೆ: ವಶ
ಮಂಗಳೂರು, ಸೆ. 23: ವಾಹನಗಳಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಹಣಕಾಸು ಸಂಸ್ಥೆಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ವಂಚಿಸುತ್ತಿದ್ದ ಹಾಗೂ ನಕಲಿ ನೋಂದಣಿ ಸಂಖ್ಯೆ ಅಳವಡಿಸಿ ವಾಹನಗಳನ್ನು ಉಪಯೋಗಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಉಲಾಯಿಬೆಟ್ಟು ಮಂಜಗುಡ್ಡೆ ಮನೆ ನಿವಾಸಿ ನವೀನ್ ನೊರೊನ್ಹಾ (41) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು - ಮೂಡುಶೆಡ್ಡೆ ನಡುವೆ ರೂಟ್ ನಂಬ್ರ: 3ಬಿ ಯಲ್ಲಿ ಸಂಚರಿಸುವ ಬಸ್ ಒಂದಕ್ಕೆ ನಕಲಿ ನೋಂದಣಿ ಸಂಖ್ಯೆಯನ್ನು ಅಳವಡಿಸಿ ಸಂಚಾರ ನಡೆಸುತ್ತಿದೆ ಎಂದು ಮಂಗಳೂರು ಸಿಸಿಬಿ ಪೊಲೀಸ್ ದೊರೆತ ಖಚಿತ ವರ್ತಮಾನದಂತೆ ಆ ಬಸ್ಸನ್ನು ಮಂಗಳೂರು ನಗರದ ಮೂಡುಶೆಡ್ಡೆ ಬಳಿ ಪರಿಶೀಲಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ.
ಆರೋಪಿಯನ್ನು ವಿಚಾರಿಸಿದಾಗ ಬಸ್ಸನ್ನು ವ್ಯಕ್ತಿಯೊಬ್ಬರಿಂದ ಖರೀದಿ ಮಾಡಿ ಅದಕ್ಕೆ ತನ್ನ ಮಾಲಕತ್ವದ ಬಸ್ಸಿನ ಚಾಸಿಸ್ ನಂಬ್ರವನ್ನು ಈ ಬಸ್ಸಿಗೆ ನಗರದ ಪಂಪ್ವೆಲ್ ಬಳಿಯ ಬೆಂದೂರಿನ ವಿನ್ಸೆಂಟ್ ಸಿಕ್ವೇರಾ(59), ಮಾಲಕತ್ವದ ವರ್ಕ್ಶಾಪ್ ನಲ್ಲಿ ನಕಲಿಯಾಗಿ ಅಳವಡಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ನವೀನ್ ನೊರೊನ್ಹಾ ನ ಮಾಹಿತಿಯಂತೆ ಇದೇ ರೀತಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ನಕಲಿ ನೋಂದಾಣಿ ಸಂಖ್ಯೆಯಲ್ಲಿ ಸಂಚರಿಸತ್ತಿದ್ದ 2 ಟ್ರಕ್ ಹಾಗೂ ಒಂದು ಜೆಸಿಬಿಯನ್ನು ಹಾಗೂ ನಕಲಿ ಚಾಸಿಸ್ ನಂಬ್ರವನ್ನು ಸೃಷ್ಟಿ ಮಾಡಲು ಉಪಯೋಗಿಸಿದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತಿನ ಮೌಲ್ಯ ರೂ. 81,09,000 ರೂ. ಎಂದು ಆಂದಾಜಿಸಲಾಗಿದೆ. ಈ ರೀತಿ ಸರಕಾರಕ್ಕೆ ತೆರಿಗೆ ಹಣ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ಮರುಪಾವತಿ ಮಾಡದೇ ವಂಚನೆ ಮಾಡುವ ಈ ವ್ಯವಸ್ಥಿತ ಜಾಲದಲ್ಲಿ ಭಾಗಿಯಾದವರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಪತ್ತೆ ಕಾರ್ಯಾಚರಣೆ ಮಾಡಲಾಗುತ್ತಿದೆ. ಆರೋಪಿಗಳು ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಲಾಭಗಳಿಸುವ ಸಮಾನ ಉದ್ದೇಶದಿಂದ ಒಟ್ಟು ಸೇರಿ ಒಳಸಂಚು ನಡೆಸಿ ಲಾರಿ ಮತ್ತು ಜೆಸಿಬಿ ಯನ್ನು ಕಳವು ಮಾಡಿಕೊಂಡು ಅವುಗಳಲ್ಲಿ ಬಸ್ಸು ಮತ್ತು ಲಾರಿಗಳ ಚಾಸಿಸ್ ನಂಬ್ರಗಳನ್ನು ಅದಲು ಬದಲಾಯಿಸಿ ಹಾಗೂ ಇಂಜಿನ್ ನಂಬ್ರಗಳನ್ನು ತಿರುಚಿಸಿ ನಂತರ ಬೇರೆ ನೋಂದಣಿ ನಂಬ್ರಗಳನ್ನು ನೀಡಿ ಅವುಗಳು ನೈಜವಾದುದೆಂದು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಬಳಿಕ ಆರ್ಟಿಒ ಸಂಬಂಧಿತ ಇಲಾಖೆಯ ನಕಲಿ ಸಹಿ ಮೊಹರು ಸೃಷ್ಟಿಸಿ ಸಂಬಂಧಪಟ್ಟ ಇಲಾಖೆಗೆ ಹಾಗೂ ಹಣಕಾಸು ಸಂಸ್ಥೆಗಳಿಗೆ ಮೋಸ ಮತ್ತು ವಂಚನೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಅವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.