ಕುಂಡಾಜೆ ಗುಂಪು ಘರ್ಷಣೆ ಪ್ರಕರಣ : ಮೂವರು ಆರೋಪಿಗಳ ಬಂಧನ
ಕಡಬ, ಸೆ.25. ಕಡಬ ಠಾಣಾ ವ್ಯಾಪ್ತಿಯ ಕುಂಡಾಜೆ ಎಂಬಲ್ಲಿ ರವಿವಾರ ಸಂಜೆ ನಡೆದ ಎರಡು ಕೋಮುಗಳ ಜನರ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಸೆಕ್ಷನ್ 307ರ ಪ್ರಕಾರ ಕೊಲೆ ಯತ್ನ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಕುಂಡಾಜೆ ನಿವಾಸಿ ಝಕರಿಯಾ ಮತ್ತು ಅವರ ತಂಗಿ ಜಮೀಲಾ ಎಂಬವರಿಗೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ರಾಮಕುಂಜ ನಿವಾಸಿಗಳಾದ ಅಶ್ವತ್, ರಿತೇಶ್ ಹಾಗೂ ಕೃಷ್ಣ ಎಂಬವರನ್ನು ಬಂಧಿಸಲಾಗಿದೆ. ಝಕರಿಯಾ ಅವರು ರವಿವಾರ ಸಂಜೆ ಉಪ್ಪಿನಂಗಡಿಯಿಂದ ಕುಂಡಾಜೆಗೆ ಬಂದು ತನ್ನ ಮನೆಯತ್ತ ತೆರಳುತ್ತಿದ್ದ ಸಂದರ್ಭ ಮದ್ಯದ ಅಮಲಿನಲ್ಲಿದ್ದ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
"ಈ ಸಂದರ್ಭ ನಾನು ಮನೆಯ ಕಡೆಗೆ ಬಂದಿದ್ದು, ಆರೋಪಿಗಳು ಮನೆಗೆ ನುಗ್ಗಿ ನನಗೆ ಹಾಗೂ ಸಹೋದರಿ ಜಮೀಲಾರಿಗೆ ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ್ದಾರೆ" ಎಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಝಕರಿಯ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.