ನೇತ್ರಾವತಿ-ಕಣ್ಣೂರು ಚತುಷ್ಪಥ ರಸ್ತೆ: ಶಾಸಕ ಲೋಬೊ
ಮಂಗಳೂರು, ಅ. 3: ನೇತ್ರಾವತಿ ನದಿಯಿಂದ ಕಣ್ಣೂರು ತನಕ ಚತುಷ್ಪಥ ರಸ್ತೆ ನಿರ್ಮಿಸಲು ಹಾಗೂ ಆ ರಸ್ತೆಯಲ್ಲಿ ಜಾಗಿಂಗ್ ಸೈಕಲಿಂಗ್ಗೂ ಅನುಕೂಲವಾಗುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಬೆಂಗಳೂರಿನಿಂದ ಆಗಮಿಸಿದ ಅಧಿಕಾರಿಗಳಿಗೆ ನಗರದ ಮೂಡದಲ್ಲಿ ನಡೆದ ಸಭೆಯಲ್ಲಿ ಅವರು ಮಾಹಿತಿ ನೀಡಿದರು.6 ಕಿ.ಮೀ. ಉದ್ದದ ರಸ್ತೆ ಇದಾಗಿದ್ದು, ಇದಕ್ಕೆ ಸರ್ವೆ ಮಾಡಲು ರಾಜ್ಯ ಸರಕಾರ 25 ಲಕ್ಷ ರೂ. ಬಿಡುಗಡೆ ಮಾಡಿದೆ. ಇದು ಕಾರ್ಯಗತವಾದರೆ ಮಹತ್ವದ ಯೋಜನೆಯಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಕೆಯುಡಿಯುಫ್ಸಿ ಅಧಿಕಾರಿ ಅಶೋಕ್ ಭಟ್ ಮಾತನಾಡಿ, ಯೋಜನೆ ತೀರಾ ಒಳ್ಳೆಯದಿದ್ದು ಇದನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳೋಣ ಎಂದರು. ಇದನ್ನು ಮೂಡಾದ ಮೂಲಕ ಟೌನ್ ಫಾನಿಂಗ್ ಯೋಜನೆಯ ರೀತಿ ಮಾಡಬೇಕು. ಇದರೊಂದಿಗೆ ನೇತ್ರಾವತಿ ನದಿ, ಮಂಗಳೂರು ಹಳೆ ಬಂದರು ಮೂಲಕ ಸುಲ್ತಾನ್ ಬತ್ತೇರಿಯಲ್ಲಿ ಸೇತುವೆ ನಿರ್ಮಿಸಿ ಮುಂದೆ ಇದನ್ನು ನವಮಂಗಳೂರು ಬಂದರಿಗೆ ಜೋಡಿಸುವ ಸಾಗಾರ್ ಮಾಲ ರಸ್ತೆಯನ್ನು ಮಾಡಲು ಉದ್ದೇಶಿಸಿದೆ. ಅಲ್ಲದೆ ಕೂಳೂರು ಬಳಿ ಅಂತರ್ ರಾಷ್ಟ್ರೀಯ ಕ್ರೀಡಾ ವಿಲೇಜ್ ನಿರ್ಮಿಸಿ ಅದರಲ್ಲಿ ಎಲ್ಲಾ ರೀತಿಯ ಕ್ರೀಡೆಗಳನ್ನೂ ಆಡಲು ಅನುಕೂಲವಾಗಲಿದೆ ಎಂದು ಶಾಸಕ ಜೆ.ಆರ್.ಲೋಬೊ ಮಾಹಿತಿ ನೀಡಿದರು.
ಈಗಾಗಲೇ ಈ ಯೋಜನೆಯ ಬಗ್ಗೆ ಅಗತ್ಯವಾದ ಸರ್ವೇ ಕಾರ್ಯ ಮುಗಿದಿದ್ದು ಹೆಚ್ಚಿನ ಸರ್ವೇ ಕೆಲಸವನ್ನು ಒಂದು ತಿಂಗಳಲ್ಲಿ ಮುಗಿಸುವಂತೆ ಶಾಸಕ ಜೆ.ಆರ್.ಲೋಬೊ ತಿಳಿಸಿದರು.
ಸಭೆಯಲ್ಲಿ ಮೂಡಾ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್, ಆಯುಕ್ತ ಶ್ರೀನಾಥ್ ರಾವ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.