ದಿಲ್ಲಿಯಲ್ಲಿ ಪಟಾಕಿ ಮಾರಾಟ: ಅ. 9ರಂದು ಸುಪ್ರೀಂ ಕೋರ್ಟ್ ತೀರ್ಪು
ಹೊಸದಿಲ್ಲಿ, ಅ. 8: ಮುಂದಿನ ದೀಪಾವಳಿ ಸಂದರ್ಭ ದಿಲ್ಲಿ ರಾಷ್ಟ್ರೀಯ ರಾಜಧಾನಿ ವಲಯ (ಎನ್ಸಿಆರ್)ದಲ್ಲಿ ಪಟಾಕಿ ಮಾರಾಟ ಮಾಡಬೇಕೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಲಿದೆ.
ದಿಲ್ಲಿ ಎನ್ಸಿಆರ್ನಲ್ಲಿ ಪಟಾಕಿ ಮಾರಾಟ ನಿಷೇಧಿಸಿ ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಮರು ಜಾರಿಗೊಳಿಸುವಂತೆ ಕೋರಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠ ತನ್ನ ತೀರ್ಪನ್ನು ಅಕ್ಟೋಬರ್ 6ಕ್ಕೆ ಕಾದಿರಿಸಿತ್ತು.
ಎನ್ಸಿಆರ್ ವ್ಯಾಪ್ತಿಯಲ್ಲಿ ಪಟಾಕಿಗಳ ಸಗಟು ಹಾಗೂ ಚಿಲ್ಲರೆ ಮಾರಾಟದ ಪರವಾನಿಗೆ ರದ್ದುಪಡಿಸಿ ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್ 11ರಂದು ಆದೇಶ ನೀಡಿತ್ತು. ಅನಂತರ ಈ ಆದೇಶವನ್ನು ಸೆಪ್ಟಂಬರ್ 12ರಂದು ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು ಹಾಗೂ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿತ್ತು.
ಕಳೆದ ವರ್ಷದ ಆದೇಶವನ್ನು ಮರು ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸಂದರ್ಭ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ತಾವು ಈ ಅರ್ಜಿಯನ್ನು ಬೆಂಬಲಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.