10 ಮಂದಿಯ ತಂಡದಿಂದ ಸಹೋದರರಿಬ್ಬರಿಗೆ ಹಲ್ಲೆ: ಆರೋಪ

Update: 2017-10-08 17:01 GMT

ಮಂಗಳೂರು, ಅ. 7: ತಂಡವೊಂದು ಇಬ್ಬರು ಸಹೋದರರ ಮೇಲೆ ಹಲ್ಲೆ ನಡೆಸಿರುವ ಘಟನೆ ಬಜಾಲ್ ಪಕ್ಕಲಡ್ಕದಲ್ಲಿ ರವಿವಾರ ಸಂಜೆ ನಡೆದಿದೆ. ಹಲ್ಲೆ ನಡೆಸಿರುವ ಆರೋಪಿಗಳು ಎರಡು ದ್ವಿಚಕ್ರ ವಾಹನಗಳಿಗೆ ಹಾನಿಗೊಳಿಸಿದ್ದಾರೆ.

ಗಾಯಾಳು ಸಹೋದರರನ್ನು ಬಜಾಲ್ ಪಕ್ಕಲಡ್ಕದ ನಿವಾಸಿಗಳಾದ ಇಜಾಝ್ ಮತ್ತು ಹಫೀಝ್ ಎಂದು ಗುರುತಿಸಲಾಗಿದೆ. ಹಲ್ಲೆಯಿಂದಾಗಿ ಗಾಯಗೊಂಡ ಇಜಾಝ್ ಮತ್ತು ಹಫೀಝ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಕ್ಕಲಡ್ಕ ಬಜಾಲ್‌ನಲ್ಲಿ ಪಂದ್ಯಾವಳಿ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಸುಮಾರು 8 ಮಂದಿಯ ತಂಡವು ನನ್ನ ಮತ್ತು ನನ್ನ ಸಹೋದರನ ಮೇಲೆ ಹಲ್ಲೆ ನಡೆಸಿದೆ. ಎಲ್ಲರೂ ಅಮಲು ಪದಾರ್ಥ ಸೇವಿಸಿದ್ದರು. ತಂಡದಲ್ಲಿದ್ದ ಓರ್ವ ಹರಿತವಾದ ಅಸ್ತ್ರದಿಂದ ನನ್ನ ತಲೆ ಹಾಗೂ ಕಾಲಿಗೆ ಹೊಡೆದಿದ್ದಾರೆ. ಬಳಿಕ ಸಹೋದರನ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಹಫೀಝ್ ತಿಳಿಸಿದ್ದಾರೆ.

ಪಂದ್ಯಾವಳಿ ವೀಕ್ಷಿಸುತ್ತಿದ್ದಾಗ ತನ್ನ ಆ್ಯಕ್ಟಿವಾ ಸ್ಕೂಟರ್‌ಗೆ ತಂಡ ದಾಳಿ ನಡೆಸಿ ಹಾನಿಗೊಳಿಸಿದೆ ಎಂದು ಬಜಾಲ್ ಮಾನಲ್‌ಕೋಡಿ ನಿವಾಸಿ ಫಾರೂಕ್ ಎಂಬವರು ಆರೋಪಿಸಿದ್ದಾರೆ. ಪಂದ್ಯಾವಳಿ ನಡೆಯುತ್ತಿದ್ದ ಸ್ಥಳದಲ್ಲಿ ವಾಹನವನ್ನು ಪಾರ್ಕ್ ಮಾಡಿ ಪಂದ್ಯಾವಳಿ ವೀಕ್ಷಿಸುತ್ತಿದ್ದಾಗ ತನ್ನ ಆ್ಯಕ್ಸಸ್ ದ್ವಿಚಕ್ರ ವಾಹನಕ್ಕೆ ಹಾನಿ ಮಾಡಿದ್ದಾರೆ ಎಂದು ರಶೀದ್ ಎಂಬವರು ಆರೋಪಿಸಿದ್ದಾರೆ. ಆರೋಪಿಗಳನ್ನು ರಾಕೇಶ್, ಪ್ರಸಾದ್, ಸ್ಟೀವನ್, ನಿಖಿಲ್ ಮತ್ತು ಇತರರು ಎಂದು ಗುರುತಿಸಲಾಗಿದೆ.

ಪ್ರಸಾದ್ ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೆ ವ್ಯಕ್ತಿಗತ ಭಿನ್ನಾಭಿಪ್ರಾಯ ಕಾರಣ ಎನ್ನಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News