ಅಕ್ರಮ ಮದ್ಯ ಸಾಗಾಟ ಪ್ರಕರಣ: ಅಪರಾಧಿಗೆ ಶಿಕ್ಷೆ
ಉಡುಪಿ, ಅ.13: 2011ರ ಡಿ.13ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಬಾರಕೂರು ರೈಲ್ವೆ ನಿಲ್ದಾಣದಲ್ಲಿ ಅಕ್ರಮವಾಗಿ ಮದ್ಯವನ್ನು ಹೊಂದಿದ್ದ ಅಪರಾಧಿ ಗಳಾದ ಬ್ರಹ್ಮಾವರದ ವಿಜಯಕುಮಾರ ಬಂಗೇರ, ಸೋಮಪ್ಪ ಸಾಲಿಯಾನ್ ಇವರಿಗೆ ಕುಂದಾಪುರ ನ್ಯಾಯಾಲಯ ಒಂದು ವರ್ಷದ ಶಿಕ್ಷೆ ಹಾಗೂ 10,000ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಅಪರಾಧಿಗಳ ಬಳಿ ಸುಮಾರು 16.500 ಲೀ. ಅಕ್ರಮ ಮಧ್ಯ ಪತ್ತೆಯಾಗಿತ್ತು. ಉಡುಪಿ ಅಬಕಾರಿ ವಲಯ 2ರ ನಿರೀಕ್ಷಕರಾದ ಸೌಮ್ಯಲತಾ ಇವರು ಅಕ್ರಮ ಮದ್ಯವನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಅಲ್ಲದೇ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ಕುಂದಾಪುರ 2ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಪರಿಶೀಲಿಸಿ ಹಾಗೂ ವಾದ ವಿವಾದವನ್ನು ಆಲಿಸಿ ಅಪರಾಧಿ ವಿರುದ್ಧ ಆರೋಪಗಳು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ರಾದ ಚಂದ್ರಶೇಖರ ಬಣಕರ ಕರ್ನಾಟಕ ಅಬಕಾರಿ ಕಲಂ 32ರಡಿ ಒಂದು ವರ್ಷ ಶಿಕ್ಷೆ ಮತ್ತು ಒಟ್ಟು ರೂ.10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ರಾದ ಮಮ್ತಾಜ್ ವಾದ ಮಂಡಿಸಿದ್ದರು.