ಲಿಂಗಾಯತ, ವೀರಶೈವ ಒಂದೇ ಧರ್ಮದ ಪ್ರಭೇದಗಳು: ಪೇಜಾವರ ಶ್ರೀ

Update: 2017-10-18 09:05 GMT

ಉಡುಪಿ, ಅ.17: ರಾಜ್ಯದಲ್ಲಿ ತೀವ್ರಗೊಳ್ಳುತ್ತಿರುವ ಲಿಂಗಾಯತ ಮತ್ತು ವೀರಶೈವ ವಿವಾದದ ಕುರಿತಂತೆ ತನ್ನ ಅಭಿಪ್ರಾಯವನ್ನು ಇಂದು ವ್ಯಕ್ತಪಡಿಸಿದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಇವೆರಡೂ ಒಂದೇ ಧರ್ಮದ ಎರಡು ಪ್ರಭೇದಗಳಾಗಿದ್ದು, ಅವುಗಳು ಒಂದಾಗಿ ಇರುವುದರಿಂದ ಲಿಂಗಾಯತ ಸಮಾಜಕ್ಕೆ ಹೆಚ್ಚಿನ ಬಲ ಬರುತ್ತದೆ ಎಂದು ಹೇಳಿದ್ದಾರೆ.

ಶ್ರೀಕೃಷ್ಣ ಮಠದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿವಾದ ವೀರಶೈವ ಮತ್ತು ಲಿಂಗಾಯತ ಧರ್ಮಗಳ ಆಂತರಿಕ ವಿಷಯವಾಗಿರುವುದರಿಂದ ನಾನು ಅದರಲ್ಲಿ ಹೆಚ್ಚಿನ ಮೂಗು ತೂರಿಸುವುದಿಲ್ಲ. ಆದರೆ ಹೊರಗಿನವನಾಗಿ ಕೆಲವು ಸಲಹೆ ನೀಡುತ್ತೇನೆ ಎಂದರು.

ಲಿಂಗಾಯತರಲ್ಲಿ ಎರಡು ತರಹದ ಸಂಪ್ರದಾಯಗಳಲ್ಲಿ ಭಿನ್ನಾಭಿಪ್ರಾಯ ಗಳಿದ್ದರೂ, ಎರಡೂ ಬೇರೆ ಬೇರೆ ಧರ್ಮಗಳಲ್ಲ. ಲಿಂಗಾಯತ, ವೀರಶೈವ ಒಂದೇ ಧರ್ಮದ ಎರಡು ಪ್ರಭೇಧಗಳು. ಹೇಗೆ ದ್ವೈತ ಹಾಗೂ ಅದ್ವೈತ ಒಂದೇ ವೈದಿಕ ಧರ್ಮದ ಪ್ರಭೇಧಗಳೊ ಅದೇ ರೀತಿ ಅವುಗಳಿಗಿಂತಲೂ ಅತ್ಯಲ್ಪ ಭಿನ್ನತೆಗಳಿರುವ ಶಿವನೇ ಪರದೈವ ಎಂದು ನಂಬಿರುವ ಈ ಎರಡೂ ಸಂಪ್ರದಾಯಗಳು ಬೇರೆ ಬೇರೆ ಧರ್ಮವಾಗಿರಲು ಸಾಧ್ಯವಿಲ್ಲ ಎಂದರು.

ಇವೆರಡನ್ನೂ ಒಂದೇ ಧರ್ಮದ ಪ್ರಭೇದವೆಂದಾಗಲಿ, ಒಂದೇ ಧರ್ಮವೆಂದಾಗಲೀ ಸ್ವೀಕರಿಸಿದರೆ ಸಮಗ್ರ ವೀರಶೈವ, ಲಿಂಗಾಯತ ಸಮಾಜಕ್ಕೆ ಹೆಚ್ಚಿನ ಬಲ ಬರಲಿದೆ ಎಂಬುದು ತಮ್ಮ ಅನಿಸಿಕೆ ಹಾಗೂ ಸಲಹೆ ಎಂದರು.ಈ ವಿಷಯದಲ್ಲಿ ತಾನು ಈಗಾಗಲೇ ಕೇಳಿರುವ ಪ್ರಶ್ನೆಗಳಿಗೆ ಯಾರೂ ಉತ್ತರವನ್ನೇ  ನೀಡಿಲ್ಲ ಎಂದೂ ಸ್ವಾಮೀಜಿ ತಿಳಿಸಿದರು.

 ಶಿವನೇ ಪರದೈವ ಎಂದು ಭಾವಿಸುವ, ಶಿವ ಪಂಚಾಕ್ಷರಿ ಜಪ, ಲಿಂಗಪೂಜೆ ಮಾಡುವ ಲಿಂಗಾಯಿತಾಗಲೇ, ವೀರಶೈವರಾಗಲೀ ಹಿಂದೂ ಧರ್ಮದಿಂದ ಬೇರೆಯಾಗಿ ಸ್ವತಂತ್ರ ಧರ್ಮವಾಗುವುದು ಹೇಗೆ ಎಂಬ ತನ್ನ ಪ್ರಶ್ನೆಗೆ ಯಾರೂ ಉತ್ತರಿಸಿಲ್ಲ ಎಂದರು.

ಹಿಂದೂ ಧರ್ಮದ ಜಾತಿ ವ್ಯವಸ್ಥೆಯನ್ನು ಒಪ್ಪದ ಲಿಂಗಾಯತ ಧರ್ಮ, ಹಿಂದೂ ಧರ್ಮದಿಂದ ಬೇರೆಯಾದರೆ ಜಾತಿವ್ಯವಸ್ಥೆಯನ್ನು ಒಪ್ಪದ ಆರ್ಯ ಸಮಾಜ, ರಾಮಕೃಷ್ಣಾಶ್ರಮ ಹಿಂದೂ ಧರ್ಮದಲ್ಲಿ ಹೇಗೆ ಇರಲು ಸಾಧ್ಯ. ಅದೇ ರೀತಿ ಜಾತಿವ್ಯವಸ್ಥೆ ಒಪ್ಪದ ಅನೇಕ ವೈಷ್ಣವ ಮತ್ತು ಶೈವ ಧರ್ಮಗಳು ಹಿಂದೂ ಧರ್ಮದಿಂದ ಬೇರೆಯೇ ಎಂಬ ಪ್ರಶ್ನೆಗೆ ನನಗೆ ಯಾರೂ ಉತ್ತರಿಸಿಲ್ಲ ಎಂದೂ ಅವರು ಹೇಳಿದ್ದಾರೆ.

ಆದುದರಿಂದ ಎಲ್ಲಾ ವೀರಶೈವರೂ, ಎಲ್ಲಾ ಲಿಂಗಾಯತರೂ ಹಿಂದೂ ಧರ್ಮದಿಂದ ಬೇರೆಯಾಗುವುದು ಬೇಡ. ನಮ್ಮ ಜೊತೆಗೆ ಇರಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ಹಿಂದೂ ಧರ್ಮದಲ್ಲಿರುವುದರಿಂದ ಹಿರಿಯ ಸಹೋದರನಾಗಿ ಇನ್ನೊಬ್ಬ ಸಹೋದರ ಮನೆ ಬಿಟ್ಟು ಹೋಗುವುದನ್ನು ನಾನು ಹೇಗೆ ಒಪ್ಪಲಿ ಎಂದವರು ಪ್ರಶ್ನಿಸಿದ್ದಾರೆ. ನಮ್ಮ ಸಹೃದಯತೆ ಹಾಗೂ ಸೋದರಬಾವವನ್ನು ಅರ್ಥಮಾಡಿಕೊಂಡು ಜೊತೆಗೆ ಇದ್ದು ಧರ್ಮಸಂಸ್ಕೃತಿ ಗಳನ್ನು ರಕ್ಷಿಸಲು ಒಟ್ಟಾಗಿ ಪ್ರಯತ್ನಿಸೋಣ ಎಂದು ಕಳಕಳಿಯ ಮನವಿ ಮಾಡಿದ್ದಾರೆ.

ದೂಷಣೆ ಸರಿಯೇ?:  ಬಸವಣ್ಣನವರ ಕಾಲದಲ್ಲಿ ನಡೆದ ದುರಂತಕ್ಕೆ ಈಗಿನ ಕಾಲದ ಬ್ರಾಹ್ಮಣರನ್ನು ದೂಷಿಸುವುದು ಸರಿಯೇ? ಹಿಂದಿನ ಕಾಲದ ಮುಸಲ್ಮಾನರು ಮಾಡಿದ ಅನ್ಯಾಯ, ಹಿಂಸಾಚಾರಕ್ಕೆ ಈಗಿನ ಮುಸಲ್ಮಾರನ್ನು ದ್ವೇಷಿಸುವುದು ಎಷ್ಟು ಸರಿ? ಹಳೇ ಕಾಲದಲ್ಲಾದ ತಪ್ಪಿಗೆ ಈಗ ಬ್ರಾಹ್ಮಣರ ಮೇಲೆ ಆರೋಪ ಸರಿಯಲ್ಲ. ಅಂದಾದ ಅನ್ಯಾಯಕ್ಕೆ, ತಪ್ಪಿಗೆ ಇಂದಿನ ಬ್ರಾಹ್ಮಣರು ಏನು ಮಾಡಲು ಸಾಧ್ಯ ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ.

ಮಾಧ್ವರಿಂದ ಬಸವಣ್ಣನಿಗೆ ಯಾವುದೇ ಅನ್ಯಾಯ ಆಗಿಲ್ಲ. ಯಾಕೆಂದರೆ ಬಸವೇಶ್ವರರ ಕಾಲದಲ್ಲಿ ವೈಷ್ಣವರಂತೂ ಇರಲೇ ಇಲ್ಲ. ಮಧ್ವಾಚಾರ್ಯರಂತೂ ಅವರ ನಂತರ ಅವತರಿಸಿದವರು. ಅಲ್ಲದೇ ಈಗಿನ ಸಮಾಜದಲ್ಲಿ ಒಂದು ಸಮಾಜದಿಂದ ಇನ್ನೊಂದು ಸಮಾಜಕ್ಕೆ ಯಾವುದೇ ಅನ್ಯಾಯವಾಗಲು ಸಾಧ್ಯ ವಿಲ್ಲ. ಅದರಲ್ಲೂ ಅಲ್ಪಸಂಖ್ಯಾತವಾದ ಬ್ರಾಹ್ಮಣ ಸಮಾಜದಿಂದ ಬಹು ಸಂಖ್ಯಾತ ಬ್ರಾಹ್ಮಣೇತರ ಸಮಾಜಕ್ಕೆ ಯಾವುದೇ ಅನ್ಯಾಯವಾಗುವುದಿಲ್ಲ ಎಂಬುದು ಈಗಿನ ರಾಜಕೀಯದಲ್ಲಿ ಎಲ್ಲರಿಗೂ ಗೊತ್ತಿದೆ ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News