ದರೋಡೆಗೆ ಯತ್ನಿಸಿದ 7 ಮಂದಿ ಆರೋಪಿಗಳ ಬಂಧನ

Update: 2017-10-19 16:09 GMT

ಮಂಗಳೂರು, ಅ. 19: ನಗರದ ಬಿಜೈಯ ಬಿಗ್‌ಬಝಾರ್ ಎದುರು ದರೋಡೆಗೆ ಯತ್ನಿಸಿದ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾವೂರು ಕಾಪಿಗುಡ್ಡೆ ಆಕಾಶಭವನದ ಪ್ರೀತಂ ಪೂಜಾರಿ(23), ದೇವಿನಗರ ಕುಂಜತ್‌ಬೈಲ್‌ನ ಶಾಲ್ ಕುಮಾರ್ (23), ದೇರೇಬೈಲ್ ಕೊಂಚಾಡಿಯ ಗೌತಮ್ ದೇವಾಡಿಗ (23), ಮೂಡುಶೆಡ್ಡೆಯ ವಿನೋದ್ ರಾಜ್ (21), ಮೂಡುಶೆಡ್ಡೆ ಎದುರುಪದವಿನ ದಿವಾಕರ (29), ತೊಕ್ಕೊಟ್ಟು ಕೃಷ್ಣನಗರದ ಪ್ರವಣ್ (25), ಯೆಯ್ಯೊಡಿ ಗುಂಡಳಿಕೆ ಮನೆ ನಿವಾಸಿ ಕಾರ್ತಿಕ್ (25) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಸಂಜೆ ಸುಮಾರು 4:40ಕ್ಕೆ ಮಂಗಳೂರು ನಗರದ ಬಿಜೈ ಕಾಫಿಕಾಡ್ ರಸ್ತೆಯಲ್ಲಿರುವ ಬಿಜೈ ಬಿಗ್‌ಬಝಾರ್ ಎದುರು 2-3 ಬೈಕ್‌ಗಳಲ್ಲಿ 6-7 ಮಂದಿ ಯುವಕರು ದರೋಡೆಗೆ ಯತ್ನಿಸುವ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರಿಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬಂಧಿತ ಆರೋಪಿಗಳು ಪ್ರಸ್ತುತ ಜೈಲ್ ನಲ್ಲಿ ವಿಚಾರಣಾ ಖೈದಿಯಾಗಿರುವ ಆಕಾಶಭವನ ಶರಣ್ ಎಂಬಾತನ ಸಹಚರರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಮಾರಕಾಯುಧಗಳನ್ನು, 3 ದ್ವಿಚಕ್ರ ವಾಹನಗಳನ್ನು ಹಾಗೂ 6 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿ ಆಕಾಶಭವನ ಶರಣ್ ರೋಹಿದಾಸ್ ಎಂಬಾತನ ಸೂಚನೆಯಂತೆ ದರೋಡೆಗೆ ಸಂಚು ರೂಪಿಸಿದ್ದಾರೆಂದು ಹೇಳಲಾಗಿದೆ. ಆರೋಪಿಗಳ ಪೈಕಿ ಪ್ರೀತಂ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ಪೂರ್ವ, ಬರ್ಕೆ, ಕಾವೂರು ಪೊಲೀಸ್ ಠಾಣೆಗಳಲ್ಲಿ ದರೋಡೆಗೆ ಯತ್ನ, ಹಫ್ತಾ ಹಣಕ್ಕೆ ಬೆದರಿಕೆಗೆ ಸಂಬಂಧಪಟ್ಟಂತೆ 3 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ವಿಶಾಲ್ ಕುಮಾರ್ ಎಂಬಾತನ ವಿರುದ್ಧ ಕಾವೂರು, ಬರ್ಕೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 2 ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉರ್ವಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಟಿ. ಆರ್.ಸುರೇಶ್ ಅವರ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News