ಶ್ರೀಕೃಷ್ಣ ಮಠ, ಅದಮಾರು ಮಠಗಳಲ್ಲಿ ಗೋಪೂಜೆ
Update: 2017-10-20 21:13 IST
ಉಡುಪಿ, ಅ.20: ದೀಪಾವಳಿಯ ಬಲಿಪಾಡ್ಯಮಿಯ ದಿನವಾದ ಇಂದು ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪೇಜಾವರ ಮಠದ ವತಿಯಿಂದ, ಪೇಜಾವರ ಮಠದ ವತಿಯಿಂದ ನೀಲಾವರದಲ್ಲಿರುವ ಗೋಶಾಲೆಯಲ್ಲಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಾಗೂ ಅದಮಾರು ಮಠದಲ್ಲಿ ಗೋಪೂಜೆಯನ್ನು ನಡೆಸಲಾಯಿತು.
ಶ್ರೀಕೃಷ್ಣ ಮಠದ ಗೋವುಗಳನ್ನು ಸಿಂಗರಿಸಿ ರಥಬೀದಿಯಲ್ಲಿ ಒಂದು ಪ್ರದಕ್ಷಿಣೆ ಬಂದು ಮಠದ ಮುಂಭಾಗದಲ್ಲಿ ಪರ್ಯಾಯ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪ್ರಧಾನ ಪುರೋಹಿತರಾದ ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಗೋಗ್ರಾಸ ನೀಡುವುದರೊಂದಿಗೆ ‘ಗೋಪೂಜೆ’ ನಡೆಯಿತು.
ಉಡುಪಿ ಶ್ರೀಅದಮಾರು ಮಠದ ಗೋಶಾಲೆಯಲ್ಲಿರುವ ಸುಮಾರು 25 ಗೋವುಗಳಿಗೆ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಗೋಪೂಜೆಯನ್ನು ನೆರವೇರಿಸಿದರು. ಮಠದ ಪುರೋಹಿತರಾದ ಶಿಬರೂರು ವಾಸುದೇವ ಆಚಾರ್ಯರು ಪೂಜೆಯ ವಿಧಿ ವಿಧಾನಗಳನ್ನು ನಡೆಸಿದರು.