ಬೋಳಿಯಾರ್: ಸರ್ಕಾರಿ ಬಸ್ ಮರು ಆರಂಭಕ್ಕಾಗಿ ಒತ್ತಾಯಿಸಿ ಪ್ರತಿಭಟನೆ

Update: 2017-10-23 18:21 GMT

ಕೊಣಾಜೆ, ಅ. 23: ಬೋಳಿಯಾರ್‌ನ ಅಮ್ಮೆಂಬಳ ದರ್ಗಾ ಬಳಿಯಿಂದ ಮಂಗಳೂರಿಗೆ ಹೋಗಲು ಪರ್ಯಾಯ ಸರ್ಕಾರಿ ಬಸ್ಸು ಸಂಚಾರ ಪುನಾರಂಭ ಗೊಳ್ಳಬೇಕು ಎಂದು ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಬಸ್ಸು ಹೋರಾಟ ಸಮಿತಿ ಆಶ್ರಯದಲ್ಲಿ ಸಾರ್ವಜನಿಕರು ಸೋಮವಾರ ಬೋಳಿಯಾರ್‌ನಲ್ಲಿ ಪ್ರತಿಭಟನೆ ನಡೆಯಿತು.

ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಮಾತನಾಡಿ, ಸರ್ಕಾರಿ ಬಸ್ಸು ಆರಂಭಗೊಂಡಾಗಲೇ ತಡೆ ಬರುವ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿದ್ದ ಅನುಮಾನ ನಿಜವಾಗಿದೆ, ನಾವು ಖಾಸಗಿ ಬಸ್ಸು ಮಾಲೀಕರ ವಿರೋಧಿಗಳಲ್ಲ. ಯಾರ ವಿರುದ್ಧವೂ ಪ್ರತಿಭಟನೆ ಅಲ್ಲ. ನಮ್ಮ ಹೋರಾಟ ಸರ್ಕಾರಿ ಬಸ್ಸು ಮತ್ತೆ ಬರಬೇಕು ಎನ್ನುವುದಾಗಿದೆ. ಬೇಡಿಕೆ ಈಡೇರದಿದ್ದಲ್ಲಿ ಸಾವಿರಾರು ಜನರನ್ನು ಸೇರಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಅಮ್ಮೆಂಬಳ ದರ್ಗಾಕ್ಕೆ ಬಸ್ಸು ಸಂಚಾರ ವಿಜೃಂಭಣೆಯಿಂದ ಆರಂಭಗೊಂಡಿದ್ದರೂ ಕೇವಲ 45 ದಿನಗಳಲ್ಲೇ ಸಂಚಾರ ರದ್ದುಗೊಂಡಿದೆ. ನ್ಯಾಯಾಲಯದಿಂದ ಯಾವುದೇ ರೀತಿಯ ತಡೆಯಿಲ್ಲ, ಜನಸಂಚಾರ ಆಧರಿಸಿ ಸಂಚಾರ ಆರಂಭಿಸುವಂತೆ ಸೂಚನೆ ನೀಡಿದ್ದರೂ ಜಿಲ್ಲಾಡಳಿತ ತಡೆಯಾಜ್ಞೆ ಬಗ್ಗೆ ಹೇಳುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ವಿಮರ್ಶಿಸಬೇಕು. ಈ ಭಾಗಕ್ಕೆ 2009ರಿಂದಲೂ 25 ಸರ್ಕಾರಿ ಬಸ್ಸುಗಳ ಪರವಾನಿಗೆ ಇದ್ದರೂ ತಡೆಯಿಂದ ಸಂಚಾರ ಸಾಧ್ಯವಾಗಿಲ್ಲ ಎಂದು ಹೋರಾಟಗಾರ ಜಗದೀಶ ಆಳ್ವ ಕೂವೆತ್ತಬೈಲ್ ತಿಳಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಬೋಳಿಯಾರ್ ಗ್ರಾಮ ಪಂ. ಅಧ್ಯಕ್ಷ ಸತೀಶ್ ಆಚಾರ್ಯ ಮಾತನಾಡಿ, ಹೋರಾಟದಲ್ಲಿ ತಾನು ಗ್ರಾಮಸ್ಥರ ಜೊತೆಗಿದ್ದು, 12 ವರ್ಷಗಳ ಹಿಂದೆಯೂ ಇಂತಹದ್ದೇ ಹೋರಾಟ ನಡೆಸಿ ಜೈಲು ಸೇರಿದ್ದು, ಮತ್ತೆ ಬಂಧನಕ್ಕೊಳಗಾಗಲು ಹೆದರುವುದಿಲ್ಲ. ಸಂಸದ, ಶಾಸಕ, ತಾಲೂಕು, ಜಿಲ್ಲಾ ಪಂ. ಸದಸ್ಯರೂ ಸಹಕಾರ ನೀಡಲಿ ಎಂದರು.

ಕುರ್ನಾಡು ತಾಲೂಕು ಪಂ. ಸದಸ್ಯ ನವೀನ್ ಪಾದಲ್ಪಾಡಿ, ಬೋಳಿಯಾರ್ ಗ್ರಾಮ ಪಂ. ಸದಸ್ಯರಾದ ಪ್ರಶಾಂತ ಗಟ್ಟಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಅಸ್ಗರ್ ಸಾಂಬಾರ್‌ತೋಟ, ರಿಯಾರ್ ರಂತಡ್ಕ, ಪಾವುಲ್ ಡಿಸೋಜ, ವಿಜಯಾ ಶೆಟ್ಟಿ, ಕುರ್ನಾಡ್ ಗ್ರಾ.ಪಂ. ಉಪಾಧ್ಯಕ್ಷ ನಿತಿನ್ ಗಟ್ಟಿ, ಸದಸ್ಯ ಶಿವಶಂಕರ್ ಭಟ್, ಪ್ರಮುಖರಾದ ಇಸ್ಮಾಯಿಲ್ ಕಡುವಾಯಿ, ಬಾಸ್ಕರ ಶೆಟ್ಟಿ, ಅಬೂಬಕ್ಕರ್, ಜಯಂತ್ ಪಾದಲ್ಪಾಡಿ, ಅಶ್ರಫ್, ಅಬೂಬಕ್ಕರ್ ರಂತಡ್ಕ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News