ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಯುವತಿ ಬಲಿ: ಆರೋಪ

Update: 2017-10-28 17:31 GMT

ಉಡುಪಿ, ಅ.28: ನಗರದ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ನಿರ್ಲಕ್ಷ್ಯದಿಂದಾಗಿ ತಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಬೆಂಗಳೂರಿನ ವಾಸುದೇವ ಭಟ್ ಎಂಬವರು ಆರೋಪಿಸಿದ್ದಾರೆ.

ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮೃತ ಯುವತಿಯ ಹೆತ್ತವರು ನಗರ ಠಾಣೆಗೆ ದೂರು ನೀಡಿದ್ದಾರೆ.

ತಮ್ಮ ಪತ್ನಿ ಮಾಲಿನಿ ಭಟ್, ಸಂಬಂಧಿಕರಾದ ಡಾ.ಎ.ಪಿ.ಭಟ್ ಹಾಗೂ ದೇವಿಪ್ರಸಾದ್ ಭಟ್ ರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಸುದೇವ ಭಟ್, ಆರೋಗ್ಯವಂತಳಾಗಿದ್ದ ತಮ್ಮ ಏಕೈಕ ಪುತ್ರಿಯನ್ನು ನಗರದ ಖಾಸಗಿ ಆಸ್ಪತ್ರೆಯೊಂದರ ವೈದ್ಯರ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯ ವರ್ತನೆಯಿಂದ ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸಿದರು.

ಮೂಲತಃ ಬ್ರಹ್ಮಾವರ ಸಮೀಪದ ಸೂರಾಲಿನವರಾದ ವಾಸುದೇವ ಭಟ್ ಬೆಂಗಳೂರಿನಲ್ಲಿ ಚಿಕ್ಕ ಟೀ ಶಾಪ್‌ನ್ನು ಹೊಂದಿದ್ದು, ಇವರ ಏಕೈಕ ಪುತ್ರಿ ವಿನೀತಾ ಎಂ.ಕಾಂ. ಪದವೀಧರೆ. 2016ರಲ್ಲಿ ಕಾಲೇಜಿನ ಕ್ರೀಡೆಯಲ್ಲಿ ಭಾಗವಹಿಸಿದ್ದಾಗ ವಿನೀತಾಗೆ ಕಾಲಿನ ಮಂಡಿ ನೋವು ಕಾಣಿಸಿಕೊಂಡಿತ್ತು. ಈ ಬಗ್ಗೆ ಬೆಂಗಳೂರಿನಲ್ಲಿ ತಜ್ಞ ವೈದ್ಯರ ಬಳಿ ತೋರಿಸಿದಾಗ ಸಣ್ಣ ತೊಂದರೆ ಇದ್ದು, ಅಗತ್ಯ ಬಿದ್ದರೆ ಮುಂದೆ ಸಣ್ಣ ಶಸ್ತ್ರಚಿಕಿತ್ಸೆ ಮಾಡಿಸಿದರೆ ಸರಿಹೋಗುತ್ತದೆ ಎಂದಿದ್ದರು. ಹೀಗಾಗಿ ಊರಿನ ತಜ್ಞ ವೈದ್ಯರಲ್ಲಿ ಎರಡನೇ ಅಭಿಪ್ರಾಯ ಪಡೆಯಲು ಉಡುಪಿಗೆ ಬಂದಾಗ ವಿನೀತಾಳನ್ನು ತನ್ನ ಪರಿಚಯದ ಮೂಳೆ ತಜ್ಞ ಡಾ.ಭಾಸ್ಕರಾನಂದ ಕುಮಾರ್ ಅವರಿಗೆ ತೋರಿಸಿದೆ ಎಂದು ಡಾ.ಎ.ಪಿ.ಭಟ್ ವಿವರಿಸಿದರು.

"ವಿನೀತಾಳನ್ನು ಪರೀಕ್ಷಿಸಿದ ಹೈಟೆಕ್ ಆಸ್ಪತ್ರೆಯ ಡಾ.ಕುಮಾರ್, ಕೂಡಲೇ ಆಪರೇಶನ್ ಮಾಡಿಸದೇ ಇದ್ದರೆ ಮುಂದೆ ಆಕೆ ನಡೆಯಲು ವಾಕರ್ ಬೇಕಾಗುತ್ತದೆ ಎಂದು ತಿಳಿಸಿದ್ದು, ನಮ್ಮದೇ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸುತ್ತೇನೆ ಎಂದರು. ಅವರ ಭರವಸೆಯ ಮಾತನ್ನು ನಂಬಿ ಜೂ.8ರಂದು ರಾತ್ರಿ ವಿನೀತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮರುದಿನವೇ ಆಕೆಯ ಆಪರೇಷನ್‌ಗೆ ಸಮಯ ನಿಗದಿ ಮಾಡಲಾಯಿತು" ಎಂದವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

"ಜೂ.9ರ ಬೆಳಗ್ಗೆ ಆಪರೇಷನ್‌ಗೆ ಮೊದಲು ನೀಡಿದ ಟೆಸ್ಟ್ ಡೋಸ್‌ನಿಂದ ವಿನೀತಾಳ ಮೈಯೆಲ್ಲಾ ಅಲರ್ಜಿಯಿಂದ ಕೆಂಪಾಯಿತು. ಇದನ್ನು ವೈದ್ಯರ ಗಮನಕ್ಕೆ ತಂದಾಗ ಏನೂ ತೊಂದರೆ ಇಲ್ಲ, ನಾವು ನಿಗಾ ವಹಿಸುತ್ತೇವೆ ಎಂದು ಎಲ್ಲರೂ ಭರವಸೆ ನೀಡಿದರು. ಆದರೆ ಆಪರೇಷನ್ ಬಳಿಕ ಐಸಿಯುನಲ್ಲಿದ್ದ ವಿನೀತಾಳ ದೈಹಿಕ ಸ್ಥಿತಿ ಸಂಜೆ ವೇಳೆ ಉಲ್ಬಣಿಸಿ ಕೋಮಾಕ್ಕೆ ಜಾರಿದಳು. ಸಂಜೆ 7ರ ಸುಮಾರಿಗೆ ಕುಸಿದು ಬಿದ್ದವಳು ಮತ್ತೆ ಎಚ್ಚರಗೊಳ್ಳಲೇ ಇಲ್ಲ" ಎಂದು ಡಾ.ಭಟ್ ಆರೋಪಿಸಿದರು.

"ತಕ್ಷಣ ಡಾ.ಭಾಸ್ಕರಾನಂದ ಕುಮಾರ್‌ರನ್ನು ಕರೆಸಿದ್ದು, ಅವರು ಮಣಿಪಾಲಕ್ಕೆ ಕರೆದುಕೊಂಡು ಹೋಗಿ, ನಾನು ಬರುತ್ತೇನೆ ಎಂದು ಹೇಳಿದರು. ಮಣಿಪಾಲಕ್ಕೆ ಹೋಗುವಾಗಲೇ ಮಗಳ ದೇಹ ತಣ್ಣಗಿತ್ತು, ಉಸಿರಷ್ಟೇ ಬಿಡುತ್ತಿದ್ದಳು. ಮಣಿಪಾಲದಲ್ಲೂ ಎರಡು ದಿನ ಪರೀಕ್ಷೆ, ಚಿಕಿತ್ಸೆ ಎಂದು ದಿನ ದೂಡಿ, ಜೂ.11ರಂದು ಮಗಳು ಮೃತಪಟ್ಟಿದ್ದಾಳೆ ಎಂದು ಹೇಳಿ ಕಳುಹಿಸಿಕೊಟ್ಟರು" ಎಂದವರು ಆರೋಪಿಸಿದರು.

"ನಮಗೆ ಶವ ಪಂಚನಾಮೆ ಹಾಗೂ ವೈದ್ಯಕೀಯ ದಾಖಲೆಗಳನ್ನು ನೀಡದೇ ಸತಾಯಿಸಿದ್ದಾರೆ. ಎಲ್ಲಾ ದಾಖಲೆಗಳನ್ನು ಕೊಡುವುದಾಗಿ ನಂಬಿಸಿ ದಿನ ದೂಡಿದ್ದರಿಂದ ದೂರು ನೀಡಲು ವಿಳಂಬವಾಗಿದೆ. ಅಲ್ಲದೇ ನಾವೆಲ್ಲರೂ ಮಾನಸಿಕವಾಗಿ ತುಂಬಾ ನೊಂದಿರುವುದರಿಂದ ಸಹ ದೂರು ನೀಡಲು ತಡವಾಗಿದೆ. ಈಗಲೂ ಸಹ ಆಸ್ಪತ್ರೆಯವರು ನಮಗೆ ಯಾವುದೇ ದಾಖಲೆ ನೀಡಿಲ್ಲ. ಮಗಳ ಸಾವಿನ ನಿಜವಾದ ಕಾರಣ ನಮಗಿನ್ನೂ ತಿಳಿದಿಲ್ಲ" ಎಂದು ದೂರಿನಲ್ಲಿ ಆರೋಪಿಸಲಾಗಿದೆ.

"ಅಲ್ಲದೇ ಸಮಾಜ ಸೇವೆಯಲ್ಲಿ ಆಸಕ್ತಳಾಗಿದ್ದ ವಿನೀತಾಳ ಅಂಗಾಂಗಗಳನ್ನು ದಾನ ಮಾಡಲು ನಾವು ಬಯಸಿದ್ದರೂ, ಅದಕ್ಕೂ ಈ ವೈದ್ಯರು ಅವಕಾಶ ನೀಡಿಲ್ಲ. ಇದು ನಮ್ಮ ಸಂಶಯಕ್ಕೆ ಕಾರಣವಾಗಿದೆ" ಎಂದು ವಾಸುದೇವ ಭಟ್ ಹೇಳಿದರು.

ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ವಿನೀತಾ ಭಟ್‌ ಕುಟುಂಬಸ್ಥರು ದೂರಿನಲ್ಲಿ ಮನವಿ ಮಾಡಿದ್ದಾರೆ. ದೂರಿನ ಪ್ರತಿಯನ್ನು ರಾಜ್ಯದ ಗೃಹಸಚಿವರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಕಳುಹಿಸಲಾಗಿದೆ.

ವಿನೀತ ಭಟ್‌ಳ ತಂದೆ ವಾಸುದೇವ ಭಟ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಸ್ಪತ್ರೆಯ ವೈದ್ಯರಾದ ಡಾ.ಉಮೇಶ್ ಪ್ರಭು, ಡಾ.ಭಾಸ್ಕರಾನಂದ ಕುಮಾರ್, ಡಾ.ಆರ್.ಭಂಡಾರಿ, ಡಾ.ಸುದರ್ಶನ್ ಭಂಡಾರಿ, ಡಾ.ಕೇಶವ ನಾಯಕ್ ಹಾಗೂ ದಾದಿಯರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.

                   (ಹೆತ್ತವರೊಂದಿಗೆ ವಿನೀತಾ ಭಟ್‌)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News