ಅಭಿವ್ಯಕ್ತಿ ಸ್ವಾತಂತ್ರ ಇಲ್ಲದ ದೇಶ ತುರ್ತು ಪರಿಸ್ಥಿತಿಗೆ ಸಮಾನ: ಬಾಲಕೃಷ್ಣ ಶೆಟ್ಟಿ
ಉಡುಪಿ, ಅ.29: ದೇಶದಲ್ಲಿ ಯಾವ ಬಟ್ಟೆ ತೊಡಬೇಕು, ಯಾವ ಆಹಾರ ತಿನ್ನಬೇಕು ಎಂಬುದನ್ನು ಬೇರೆಯವರು ನಿರ್ಧರಿಸುತ್ತಾರೆ. ಸಂವಿಧಾನ ಪ್ರತಿಯೊಬ್ಬರಿಗೆ ನೀಡಿರುವ ಮಾತನಾಡುವ ಹಕ್ಕನ್ನು ಸತತವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಹೀಗೆ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ ಇಲ್ಲದ ದೇಶ ತುರ್ತು ಪರಿಸ್ಥಿತಿಗೆ ಸಮಾನ ಎಂದು ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಟೀಕಿಸಿದ್ದಾರೆ.
ಉಡುಪಿಯ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ರವಿವಾರ ಆಯೋಜಿಸಲಾದ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ)ದ ಉಡುಪಿ ತಾಲೂಕು ಸಮಿತಿಯ 22ನೆ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮೋದಿ ನೇತೃತ್ವದ ಕೇಂದ್ರ ಸರಕಾರದ ಆರ್ಥಿಕ ನೀತಿಯ ವೈಫಲ್ಯದ ವಿರುದ್ಧ ಜನರು ಒಗ್ಗೂಡಿ ಹೋರಾಟ ನಡೆಸಬಾರದೆಂಬ ಕಾರಣಕ್ಕೆ ಅವರ ದಿಕ್ಕು ತಪ್ಪಿಸಿ ಹೊಡೆ ಯುವ ಕೆಲಸಕ್ಕಾಗಿ ಈ ದೇಶದಲ್ಲಿ ಕೋಮುವಾದವನ್ನು ಬಿತ್ತಲಾಗುತ್ತಿದೆ. ಹಾಗಾಗಿ ನಾವು ಕೋಮುವಾದವನ್ನು ಮೊದಲು ವಿರೋಧಿಸಬೇಕು ಎಂದು ಅವರು ತಿಳಿಸಿದರು.
ಜಿಎಸ್ಟಿಯಿಂದ ಜನಸಾಮಾನ್ಯರ ಮೇಲೆ ತೆರಿಗೆಗಳು ಹೆಚ್ಚಾಗುತ್ತಿವೆ. ಸಣ್ಣ ವ್ಯಾಪಾರಸ್ಥರು ವ್ಯಾಪರವನ್ನು ಮುಚ್ಚುತ್ತಿದ್ದಾರೆ. ಮೀನು ಹಾಗೂ ಅದನ್ನು ಹಿಡಿ ಯುವ ಸಲಕರಣೆಗಳ ಮೇಲೂ ತೆರಿಗೆ ವಿಧಿಸಿ ಮೀನುಗಾರರ ಬದುಕಿಗೆ ಬರೆ ಎಳೆಯಲಾಗಿದೆ. ಅದೇ ರೀತಿ ರಾಜ್ಯ ಸರಕಾರದ ತೆರಿಗೆ ಸಂಗ್ರಹಿಸುವ ಹಕ್ಕನ್ನು ಕೂಡ ಕಸಿದುಕೊಳ್ಳಲಾಗಿದೆ. ಜಿಎಸ್ಟಿ ಹಾಗೂ ನೋಟು ರದ್ದತಿಯಿಂದ ಜನ ಸಾಮಾನ್ಯರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿದೆ ಎಂದರು.
ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಏರಿಕೆಯಾಗಿದ್ದು, ಜಗತ್ತಿನ 120 ದೇಶಗಳ ಪಟ್ಟಿಯಲ್ಲಿ 97 ಸ್ಥಾನದಲ್ಲಿದ್ದ ಭಾರತ ಈಗ 100ನೆ ಸ್ಥಾನಕ್ಕೆ ಬಂದಿದೆ. ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವ ಸಂಖ್ಯೆ ಶೇ.19.7ರಿಂದ ಶೇ.20ಕ್ಕೆ ಹೆಚ್ಚಾಗಿದ್ದು, ಇವರಲ್ಲಿ 9.7 ಕೋಟಿ ಮಕ್ಕಳಿದ್ದಾರೆ. ಶೇ.58 ಬಾಲಕಿಯರು ಹಾಗೂ ಶೇ.50 ಬಾಲಕರು ಅಪೌಷ್ಟಿಕತೆಯಿಂದ ಬಳಲುತ್ತಿರುವುದಾಗಿ ವೈದ್ಯಕೀಯ ವರದಿ ತಿಳಿಸಿದೆ ಎಂದವರು ಹೇಳಿದರು.
ರೈತರ ಸಾಲ ಮನ್ನ ಮಾಡಲು ಆಗದವರು ದೇಶದ 500 ಕಾರ್ಪೊರೇಟ್ ಕಂಪೆನಿಗಳ 86 ಸಾವಿರ ಕೋಟಿ ರೂ. ಮನ್ನಾ ಮಾಡಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಕಳೆದ ಮೂರು ವರ್ಷಗಳಲ್ಲಿ 1-3 ಲಕ್ಷ ಮಾತ್ರ ಉದ್ಯೋಗವನ್ನು ಸೃಷ್ಟಿ ಮಾಡಿದೆ. ಅಂದರೆ ಇವರು ನೀಡಿದ ಭರವಸೆಯ ಶೇ.0.5ರಷ್ಟು ಮಾತ್ರ ಉದ್ಯೋಗ ಸೃಷ್ಟಿಯಾಗಿದೆ. ನೋಟು ರದ್ದತಿ ಮತ್ತು ಜಿಎಸ್ಟಿಯು ದೇಶದ ಬಹುದೊಡ್ಡ ಹಗರಣ ಎಂದು ಬಾಲಕೃಷ್ಣ ಶೆಟ್ಟಿ ಆರೋಪಿಸಿದರು.
ಕೇರಳದಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯು 14 ದಿನಗಳ ಕಾಲ ಸಿಪಿಎಂ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಆದರೆ ನಿಜವಾಗಿ ಇದು ಬಿಜೆಪಿಯ ಆರ್ಥಿಕ ಧೋರಣೆಯಾದ ನೋಟು ರದ್ದತಿ ಹಾಗೂ ಜಿಎಸ್ಟಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿರುವ ಸಿಪಿಎಂ ಪಕ್ಷವನ್ನು ಬಾಯಿ ಮುಚ್ಚಿಸುವ ಪ್ರಯತ್ನವೇ ಹೊರತು ಕೊಲೆಯಲ್ಲ. ಇದು ಕೇವಲ ನೆಪ ಮಾತ್ರ ಎಂದು ಅವರು ದೂರಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಕೆ.ಶಂಕರ್, ಮುಖಂಡ ವಿಶ್ವನಾಥ ರೈ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ವೆಂಕಟೇಶ್ ಕೋಣಿ, ಉಮೇಶ್ ಕುಂದರ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಿಪಿಎಂ ಸಮಿತಿ ಸದಸ್ಯ ಕೆ.ಲಕ್ಷ್ಮಣ್ ವಹಿಸಿದ್ದರು.
ತಾಲೂಕು ಸಮಿತಿ ಕಾರ್ಯದರ್ಶಿ ವಿಠಲ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.