ನಾನೆಂದೂ ರಾಜಕೀಯಕ್ಕೆ ಹೋಗಲಾರೆ, ಜನರ ಪ್ರೀತಿಯೇ ನನಗೆ ಶ್ರೀರಕ್ಷೆ: ಡಾ. ಎಂ.ಎನ್. ರಾಜೇಂದ್ರ ಕುಮಾರ್
ಪುತ್ತೂರು, ಅ. 29: ನಾನೆಂದೂ ರಾಜಕೀಯಕ್ಕೆ ಹೋಗುವುದಿಲ್ಲ. ಇಲ್ಲಿನ ಜನರು ಕಳೆದ 23 ವರ್ಷಗಳಿಂದ ನನ್ನನ್ನು ಪ್ರೀತಿಯಿಂದ ಕಂಡಿದ್ದಾರೆ. ಅವರ ಪ್ರೀತಿಯೊಂದಿಗೆ ಸಹಕಾರಿ ಕ್ಷೇತ್ರದಲ್ಲಿಯೇ ಮುಂದುವರಿಯುತ್ತೇನೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಅವರು ರವಿವಾರ ಸಂಜೆ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಪುತ್ತೂರು ತಾಲೂಕು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ನೇತೃತ್ವದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜಾತಿಬಲ, ತೋಳ್ಬಲ ಮತ್ತು ಆರ್ಥಿಕ ಬಲದಿಂದ ಮಾತ್ರ ರಾಜ್ಯ ಮಟ್ಟದಲ್ಲಿ ಅಧ್ಯಕ್ಷ ಸಾಧ್ಯವಿರುವ ಇಂದಿನ ದಿನಗಳಲ್ಲಿ ತನಗೆ ಇವು ಯಾವುದೂ ಇಲ್ಲದೆಯೇ ಎಲ್ಲರ ಪ್ರೀತಿಯ ಮೂಲಕ ಮಾತ್ರ ಈ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಯಿತು. ಸಂಸ್ಥೆಯ ಮೂಲಕ ಮುಂದಿನ ದಿನಗಳಲ್ಲಿ ಗೊಬ್ಬರ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಪುತ್ತೂರಿನ ಟಿಎಪಿಸಿಎಂಎಸ್ ಸೊರಗಿದ್ದು ಅದನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಗೊಬ್ಬರ ಮಾರಾಟದ ಏಜೆನ್ಸಿಯನ್ನು ಈ ಸಂಸ್ಥೆಗೆ ವಹಿಸಿಕೊಡಲಾಗು ವುದು. ಅವಿಭಜಿತ ಜಿಲ್ಲೆಯ ರೈತರು ಬೆಳೆದ ಬೆಳೆಯನ್ನು ಸರ್ಕಾರದ ಬೆಂಬಲ ಬೆಲೆಯೊಂದಿಗೆ ಖರೀದಿಸಿ ಮಾರಾಟ ಮಾಡುವ ಚಿಂತನೆ ನಡೆಸಲಾಗುವುದು ಎಂದ ಅವರು ರಾಜ್ಯದಲ್ಲಿ ಯೂರಿಯಾ ತಯಾರಿಕಾ ಕೇಂದ್ರ ಸ್ಥಾಪನೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರಲ್ಲಿ ಬೇಡಿಕೆ ಸಲ್ಲಿಸಲಾಗಿದೆ. ಇದಕ್ಕಾಗಿ 100 ಎಕ್ರೆ ಜಮೀನು ಕಾದಿರಿಸುವ ಬಗ್ಗೆ ಅವರು ಸೂಚನೆ ನೀಡಿದ್ದು, ಸ್ಥಳಾವಕಾಶ ದೊರೆತ ಬಳಿಕ ಯೂರಿಯಾ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾ ಗುವುದು ಎಂದು ತಿಳಿಸಿದರು.
ಡಾ. ರಾಜೇಂದ್ರ ಕುಮಾರ್ ಸಹಕಾರಿ ಸಾಮ್ರಾಟ್: ರವಿರಾಜ ಹೆಗ್ಡೆ
ಸಮಾರಂಭದ ಅಧ್ಯಕ್ಷತೆ ವಹಿಸಿ ಡಾ. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಅವರು ಡಾ. ರಾಜೇಂದ್ರ ಕುಮಾರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಹಕಾರಿ ಕ್ಷೇತ್ರವನ್ನು ಬೆಳೆಸಿದ ರೀತಿ ಎಲ್ಲರಿಗೂ ಮಾದರಿಯಾಗಿದೆ. ಇದರೊಂದಿಗೆ ಅಪೆಕ್ಸೆ ಬ್ಯಾಂಕ್ ಅಧ್ಯಕ್ಷರಾಗಿ ಅದನ್ನು ಯಶಸ್ವಿಯಾಗಿ ಮುನ್ನಡೆಸಿ ಇದೀಗ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ರಾಜೇಂದ್ರ ಕುಮಾರ್ ಅವರು ಸಹಕಾರಿ ಸಮ್ರಾಟ್ ಆಗಿದ್ದಾರೆ ಎಂದು ಬಣ್ಣಿಸಿದರು.
ರಾಜೇಂದ್ರ ಕುಮಾರ್ ಅವರು ಸಹಕಾರಿ ಮಂತ್ರಿಯಾದಲ್ಲಿ ಎಲ್ಲಾ ಸಹಕಾರಿ ಸಂಘಗಳಿಗೆ ಕಾನೂನು ತೊಡಕುಗಳು ಇನ್ನಿತರ ಸಮಸ್ಯೆಗಳು ಪರಿಹಾರ ವಾಗಲು ಸಾಧ್ಯ. ಅವರು ಎಂಎಲ್ಸಿಯಾಗಿ ಮಂತ್ರಿಯಾಗಿ ಜನರಸೇವೆ ಮಾಡುವಂತಾಗಲಿ ಎಂದರು.
ಕಾವು ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಅಭಿನಂದನಾ ಭಾಷಣ ಮಾಡಿದರು. ರಮೇಶ್ ಕೈಕುರೆ ಅಭಿನಂದನಾ ಪತ್ರ ವಾಚಿಸಿದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಎಸ್.ಬಿ. ಜಯರಾಮ ರೈ, ಶಶಿಕುಮಾರ್ ರೈ ಬಾಲ್ಯೊಟ್ಟು, ಡಾ. ದೇವಿಪ್ರಸಾದ್, ದೇವರಾಜ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಅವರನ್ನು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸನ್ಮಾನಿಸಿ ಗೌರವಿಸಿದರು. ಆಲಂಕಾರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೆದಂಬಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕೃಷ್ಣಕುಮಾರ್ ರೈ ವಂದಿಸಿದರು. ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.