ಶಿಕ್ಷಣದಿಂದ ಅಭಿವೃದ್ದಿ ಮತ್ತು ಸೌಹಾರ್ದತೆಗೆ ಒತ್ತು: ಸಂಶುದ್ಧೀನ್
ಸುಳ್ಯ, ನ.2: ಜಮೀಯತುಲ್ ಫಲಾಹ್ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರೀಯ ಸಮಿತಿ ಇದರ ಅಧೀನದಲ್ಲಿರುವ ಸುಳ್ಯ ತಾಲೂಕು ಘಟಕದ ವತಿಯಿಂದ 22ನೆ ವರ್ಷದ ಆರ್ಥಿಕ ದುರ್ಬಲ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಣಾ ಕಾರ್ಯಕ್ರಮ ಸುಳ್ಯದ ಅನ್ಸಾರ್ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ಜರಗಿತು.
ಸಹಾಯಧನವನ್ನು ಜಿಲ್ಲಾ ಯೋಜನಾ ಸಮಿತಿ ಸದಸ್ಯ ಕೆ.ಎಂ. ಮುಸ್ತಫ ವಿತರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಎಸ್. ಸಂಶುದ್ಧೀನ್ ಮಾತನಾಡಿ, ಎಲ್ಲರೂ ಶಿಕ್ಷಣ ಪಡೆದಾಗ ಸ್ವಾವಲಂಬಿಗಳಾಗಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗುತ್ತದೆ. ಇದರಿಂದ ಪರಸ್ಪರ ಸಹಕಾರ ಮತ್ತು ಸೌಹಾರ್ದತೆ ನೆಲೆಗೊಳ್ಳಲು ಪೂರಕವಾಗುತ್ತದೆ ಎಂದು ಹೇಳಿದರು.
ಸಭಾದ್ಯಕ್ಷತೆಯನ್ನು ಜಮೀಯತುಲ್ ಫಲಾಹ್ ತಾಲೂಕು ಘಟಕದ ಅಧ್ಯಕ್ಷ ಎಚ್.ಎ. ಅಬ್ಬಾಸ್ ಸಂಟ್ಯಾರ್ ವಹಿಸಿದ್ದರು. ವೇದಿಕೆಯಲ್ಲಿ ಎ.ಪಿ.ಎಂ.ಸಿ. ಸದಸ್ಯ ಆದಂ ಹಾಜಿ ಕಮ್ಮಾಡಿ, ಗಾಂಧೀನಗರ ಎಂ.ಜೆ.ಎಂ. ಉಪಾಧ್ಯಕ್ಷ ಹಾಜಿ ಅಬ್ಬಾಸ್ ಕಟ್ಟೆಕ್ಕಾರ್ಸ್, ಸ್ಥಾಪಕ ಸದಸ್ಯ ಹಾಜಿ ಬೀರಾ ಮೊದೀನ್, ಹಸೈನಾರ್ ಹಾಜಿ ಗೋರಡ್ಕ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನಕಾರ್ಯದರ್ಶಿ ಮೂಸಾ ಪೈಂಬಚ್ಚಾಲ್ ಸ್ವಾಗತಿಸಿ, ಮೊಯ್ದಿನ್ ಫೇನ್ಸಿ ವಂದಿಸಿದರು.