×
Ad

ಭಾರತದ ಕರಾಟೆ ಅಭಿವೃದ್ಧಿಗೆ ಮಲೇಶ್ಯ ನೆರವು: ಮಲೇಶ್ಯದ ರಾಷ್ಟ್ರೀಯ ಕರಾಟೆ ಸಂಸ್ಥೆಯ ಮುಖ್ಯ ಕೋಚ್ ವಸಂತನ್

Update: 2017-11-05 17:27 IST

ಮಂಗಳೂರು, ನ.5: ಭಾರತದಲ್ಲಿ ಕರಾಟೆ ಕಲೆಯನ್ನು ಬೆಳೆಸಲು ಮಲೇಶ್ಯ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಮಲೇಶ್ಯದ ರಾಷ್ಟ್ರೀಯ ಕರಾಟೆ ಸಂಸ್ಥೆಯ ಮುಖ್ಯ ಕೋಚ್ ಶಿಯಾನ್ ವಸಂತನ್ ಪ್ರಕಟಿಸಿದರು.

ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಪಂದ್ಯಾವಳಿ 'ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್-2017'ನಲ್ಲಿ ಪ್ರಮುಖ ಮೇಲ್ವಿಚಾರಕರಾಗಿ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಭಾರತದಲ್ಲಿ ಕರಾಟೆ ಕಲಿಸುವ ಕೋಚ್‌ಗಳಿಗೆ ಗೌರವಧನ ಹೆಚ್ಚಿಸುವುದು, ಉದಯೋನ್ಮುಖ ಕರಾಟೆ ಪಟುಗಳಿಗೆ ಮಲೇಶ್ಯದಲ್ಲಿ ಉನ್ನತ ಮಟ್ಟದ ತರಬೇತಿ ನೀಡುವುದು ಹಾಗೂ ವಿಶ್ವದರ್ಜೆಯ ಕರಾಟೆಪಟುಗಳನ್ನು ತಯಾರು ಮಾಡಲು ಎಲ್ಲ ಅಗತ್ಯ ನೆರವು ನೀಡಲಿದೆ. ಮಲೇಶ್ಯ ಕರಾಟೆ ಸಂಸ್ಥೆಯ ಅಧ್ಯಕ್ಷ ಹಾಗೂ ಉದ್ಯಮಿ ಡಟ್ಯಾಕ್ ಪ್ಲೆಮೆಸ್ತೂ ಇದಕ್ಕೆ ಅಗತ್ಯ ಹಣಕಾಸು ನೆರವು ಒದಗಿಸುವ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.

ಮಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಸಾಧನೆ ತೋರುವ ನಾಲ್ವರನ್ನು ಮಲೇಶ್ಯದಲ್ಲಿ ನಡೆಯುವ ಅಂತಾರಾಷ್ಟ್ರೀಯ ಟೂರ್ನಿಗೆ ಆಯ್ಕೆ ಮಾಡಲಾಗುವುದು ಎಂದವರು ತಿಳಿಸಿದರು.

ವಿಶ್ವದಲ್ಲೇ ಅತಿಹೆಚ್ಚು ಸಂಖ್ಯೆಯ ಕರಾಟೆಪಟುಗಳು ಭಾರತದಲ್ಲಿ ತಯಾರಾಗುತ್ತಿದ್ದು, ಕರಾಟೆ ಕ್ಷೇತ್ರದಲ್ಲಿ ಬಾರತಕ್ಕೆ ಉಜ್ವಲ ವಿಷ್ಯವಿದೆ ಎಂದು ಅಭಿಪ್ರಾಯಿಸಿದ ವಸಂತನ್, ಭಾರತದಲ್ಲಿ ವಿದ್ಯಾರ್ಥಿ ದೆಸೆಯಲ್ಲೇ ಮಕ್ಕಳು ಈ ಸಮರ ಕಲೆಗೆ ಆಕರ್ಷಿತರಗುತ್ತಿರುವುದು ಉತ್ತಮ ಬೆಳವಣಿಗೆ. ಅವರಿಗೆ ಎಳವೆಯಲ್ಲೇ ಉತ್ತಮ ಮಾರ್ಗದರ್ಶನ ಹಾಗೂ ಉತ್ತೇಜನ ಸಿಕ್ಕಿದರೆ ಬಾರತದಲ್ಲೂ ವಿಶ್ವದರ್ಜೆಯ ಪಟುಗಳನ್ನು ಸಿದ್ಧಪಡಿಸಬಹುದು ಎಂದರು.

2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕರಾಟೆ ಸೇರಿರುವುದು ಏಷ್ಯನ್ ದೇಶಗಳಲ್ಲಿ ಈ ಕಲೆಯ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ಸಿಗಲಿದೆ. ಭಾರತದ ಜತೆ ಇಂಡೋನೇಶ್ಯ, ಥಾಯ್ಲೆಂಡ್ ಹಾಗೂ ಸಿಂಗಾಪುರದಲ್ಲಿ ಕೂಡಾ ಉತ್ತಮ ಕರಾಟೆ ಪಟುಗಳು ರೂಪುಗೊಳ್ಳುತ್ತಿದ್ದಾರೆ ಎಂದರು.

ಭಾರತದಲ್ಲಿ ಉತ್ತಮ ಕರಾಟೆ ಪ್ರತಿಭೆಗಳಿದ್ದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದಷ್ಟು ಅವಕಾಶಗಳನ್ನು ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಲೇಶ್ಯ ಅಗತ್ಯ ನೆರವು ನೀಡಲಿದೆ. ಟೋಕಿಯೊ ಒಲಿಂಪಿಕ್ಸ್‌ಗೆ ಭಾರತವನ್ನು ಸಜ್ಜುಗೊಳಿಸುವಲ್ಲೂ ತಮ್ಮ ದೇಶ ನೆರವಾಗಲಿದೆ ಎಂದು ಹೇಳಿದರು.

ಮಂಗಳೂರಿನ ಮೇಯರ್ ಸ್ವತಃ ಕರಾಟೆ ಪಟುವಾಗಿ ಹೆಣ್ಣುಮಕ್ಕಳಲ್ಲಿ ಕರಾಟೆ ಕಲೆ ಜನಪ್ರಿಯಗೊಳಿಸಲು ಗಣನೀಯ ಕೊಡುಗೆ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದ ಟೂರ್ನಿ ಮಹತ್ವದ್ದಾಗಿದೆ ಎಂದು ಶಿಯಾನ್ ವಸಂತನ್ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News