ಆಸ್ಪತ್ರೆಯಲ್ಲಿರುವ ಯೋಧನ ಭೇಟಿಯಾದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್
ಮಂಗಳೂರು, ನ.6: ವಿಷಪೂರಿತ ಹಾವಿನ ಕಡಿತದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಮುಡಿಪು ನಿವಾಸಿ ಯೋಧ ಸಂತೋಷ್ ಕುಮಾರ್ ಅವರನ್ನು ಕೆಪಿಸಿಸಿ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸೋಮವಾರ ಬೆಳಗ್ಗೆ ಭೇಟಿಯಾದರು.
ನಗರದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧ ಸಂತೋಷ್ ಕುಮಾರ್ ಅವರನ್ನು ಭೇಟಿಯಾದ ವೇಣುಗೋಪಾಲ್ ಅವರು ಯೋಗಕ್ಷೇಮ ವಿಚಾರಿಸಿದರು.
ಯೋಧ ಸಂತೋಷ್ ಕುಮಾರ್ ಗೆ ಚಿಕಿತ್ಸೆಗೆ ಸಹಾಯ, ಸಹಕಾರ ನೀಡಲು ಕಾಂಗ್ರೆಸ್ ಸರಕಾರ ಸಿದ್ಧವಿದೆ ಎಂದು ವೇಣುಗೋಪಾಲ್ ಸುದ್ದಿಗಾರರಿಗೆ ತಿಳಿಸಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜ, ಮೇಯರ್ ಕವಿತಾ ಸನೀಲ್ ಮತ್ತಿತತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಯೋಧ ಸಂತೋಷ್ ಕುಮಾರ್ ಕೆಲವು ದಿನಗಳ ಹಿಂದೆ ರಜೆಯಲ್ಲಿ ಊರಿಗೆ ಮರಳಿದ್ದರು. ಮುಡಿಪುನಲ್ಲಿರುವ ಮನೆಯ ಬಳಿ ಅವರಿಗೆ ವಿಷಪೂರಿತ ಹಾವು ಕಚ್ಚಿದ ಪರಿಣಾಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.