×
Ad

ರಸ್ತೆಗಳು ಅಭಿವೃದ್ದಿಯಾದರೆ ಆಯಾ ಪ್ರದೇಶವೂ ಅಭಿವೃದ್ದಿ ಕಾಣುತ್ತದೆ: ಯು.ಟಿ.ಖಾದರ್

Update: 2017-11-06 18:52 IST

ಕೊಣಾಜೆ, ನ. 6: ಯಾವ ಪ್ರದೇಶದಲ್ಲಿ ರಸ್ತೆ ಚೆನ್ನಾಗಿರುತ್ತದೋ ಆ ಪ್ರದೇಶ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ. ಆದ್ದರಿಂದ ಗ್ರಾಮೀಣ ಪ್ರದೇಶದ ರಸ್ತೆ ಹಾಗೂ ಇತರ ಮೂಲಭೂತ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರವು ವಿಶೇಷವಾಗಿ ಮುತುವರ್ಜಿ ವಹಿಸಿದೆ ಎಂದು ಸಚಿವ ಯು.ಟಿ.ಖಾದರ್ ಅವರು ಹೇಳಿದರು.

ಕುರ್ನಾಡು ಗ್ರಾಮದ ಮದ್ಯನಡ್ಕ ಮಸೀದಿ, ಬಾರೆಮಾರ್, ಹನ್ನೆರಡುಮುಡಿ, ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನ ಸಂಪರ್ಕ ರಸ್ತೆ ವಿಸ್ತರಣೆ ಹಾಗೂ ಕಾಂಕ್ರೀಟ್ ಕಾಮಗಾರಿ ಶಿಲಾನ್ಯಾಸ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಯಾವುದೇ ಯೋಜನೆಗಳಿದ್ದರೂ 10ರಿಂದ 15 ವರ್ಷಗಳ ಸುದೀರ್ಘ ಬಾಳಿಕೆ ಬರುವಂತದ್ದಾಗಿರಬೇಕು, ಈ ನಿಟ್ಟಿನಲ್ಲಿ ಬೇಡಿಕೆ ಇರುವ ಪ್ರದೇಶಗಳಿಗೆ ರಸ್ತೆ ನಿರ್ಮಿಸಿ ಕಾಂಕ್ರೀಟ್ ಹಾಕುವ ಕಾರ್ಯ ಮಾಡಲಾಗುತ್ತಿದೆ. ಹಿಂದಿನಿಂದಲೂ ಒಬ್ಬೊಬ್ಬರ ಆಯಾ ಸಂದರ್ಭದಲ್ಲಿ ನೀಡಿರುವ ಕೊಡುಗೆಯಿಂದಾಗಿ ಕುರ್ನಾಡು ಗ್ರಾಮ ಜಿಲ್ಲೆಯಲ್ಲೇ ತನ್ನದೇ ಆದ ಇತಿಹಾಸ ಹೊಂದಿದೆ. ಮದ್ಯನಡ್ಕದಿಂದ ಕುರ್ನಾಡುವಿಗೆ ಸಂಪರ್ಕ ರಸ್ತೆಗೆ ಇದ್ದ ಬೇಡಿಕೆಗೆ ಅನುಸಾರವಾಗಿ ಸ್ಥಳೀಯರು ಜಮೀನು ಬಿಟ್ಟುಕೊಟ್ಟಿದ್ದಾರೆ. ತಮ್ಮೂರಿನ ರಸ್ತೆಗಾಗಿ ಕೊಡುಗೆ ನೀಡುವುದು ಮುಖ್ಯ ಎಂದರು.

ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ ಮಾತನಾಡಿ, ಕುರ್ನಾಡು ಭಾಗಕ್ಕೆ ಕಾಂಗ್ರೆಸ್ ಅತ್ಯಂತ ಹೆಚ್ಚು ಕೊಡುಗೆ ನೀಡಿದ್ದರೂ ಚುನಾವಣೆಯಲ್ಲಿ ಮತಗಳಿಗೆ ಕೊರತೆಯಾಗುತ್ತಿದೆ. ಆದರೂ ಸಚಿವರು ರಾಜಕೀಯ ಮರೆತು ಪ್ರದೇಶಾಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ, ಮುಂಬರುವ ಚುನಾವಣೆಯಲ್ಲಿ ಈ ಭಾಗದಲ್ಲಿ ಯು.ಟಿ.ಖಾದರ್ ಅವರು ಮುನ್ನಡೆ ಸಾದಿಸುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮದ್ಯನಡ್ಕ ಪ್ರದೇಶಾಭಿವೃದ್ಧಿ ಸಮಿತಿಯಿಂದ ಸಚಿವ ಯು.ಟಿ.ಖಾದರ್, ಪ್ರಶಾಂತ ಕಾಜವ, ಡಿಸಿಸಿ ನೂತನ ಕಾರ್ಯದರ್ಶಿ ಉಮ್ಮರ್ ಪಜೀರ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೇವದಾಸ ಭಂಡಾರಿ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಪಂ. ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್, ಕುರ್ನಾಡು ಗ್ರಾ.ಪಂ. ಸದಸ್ಯ ಗೋಪಾಲ ಬಂಗೇರ, ಉದ್ಯಮಿ ಗಣೇಶ್ ನಾಯ್ಕಾ, ಆದಿಮಾಯೆ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್, ಪ್ರಮುಖರಾದ ಸುಬ್ಬಣ್ಣ ನಾವಡ, ಇಸ್ಮಾಯಿಲ್, ಉಮ್ಮರ್ ಫಾರೂಕ್, ಸೂಫಿಕುಂಞಿ, ಲತೀಫ್, ಇಬ್ರಾಹಿಂ, ಖಾಸಿಂ, ಗುತ್ತಿಗೆದಾರ ಕೆ.ಕೆ.ನಾಸೀರ್ ಇನ್ನಿತರರು ಉಪಸ್ಥಿತರಿದ್ದರು.

ಕುರ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ದೇವದಾಸ ಭಂಡಾರಿ ಸ್ವಾಗತಿಸಿದರು. ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News