‘ಸಾಧು ಸಂತರು ಉಳಿದುಕೊಳ್ಳಲು 800 ಮನೆಗಳ ಅವಶ್ಯಕ’
ಉಡುಪಿ, ನ.7: ಉಡುಪಿಯಲ್ಲಿ ನ.24ರಿಂದ 26ರವರೆಗೆ ನಡೆಯುವ ಧರ್ಮ ಸಂಸದ್ಗೆ ಬರುವ ಸಾಧು ಸಂತರಿಗೆ ನಗರದ ಸುತ್ತಮುತ್ತ ಇರುವ ಮನೆಗಳಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸುವಂತೆ ಧರ್ಮ ಸಂಸದ್ ಸ್ವಾಗತ ಸಮಿತಿ ಮನವಿ ಮಾಡಿದೆ.
ಉಡುಪಿಯ ಧರ್ಮ ಸಂಸದ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುರಾಣಿಕ್, ಮೂರು ದಿನಗಳ ಧರ್ಮ ಸಂಸದ್ಗೆ ದೇಶದ ವಿವಿಧೆಡೆಗಳಿಂದ ಸುಮಾರು 2500 ಸಾಧು ಸಂತರು ಹಾಗೂ ಸನ್ಯಾಸಿಗಳು ಆಗಮಿಸುವ ನಿರೀಕ್ಷೆ ಇದ್ದು, ಈಗಾಗಲೇ 1500 ಸ್ವಾಮೀಜಿಗಳಿಗೆ ಬೇಕಾದ ವ್ಯವಸ್ಥೆಯನ್ನು ಮಾಡಲಾಗಿದೆ. ಉಳಿದವರು ಉಳಿದುಕೊಳ್ಳಲು ಇನ್ನು 800 ಮನೆಗಳ ಅವಶ್ಯಕತೆ ಇದೆ ಎಂದು ಹೇಳಿದರು.
ಸಾಧು ಸಂತರು ಉಳಿದುಕೊಳ್ಳಲು ಸಸ್ಯಾಹಾರ, ಮಾಂಸಾಹಾರ ಮನೆಗಳೆಂಬ ಪ್ರತ್ಯೇಕತೆ ಇಲ್ಲ. ಆದರೆ ಅವರು ಉಳಿದುಕೊಳ್ಳುವ ಸಮಯ ಮನೆಯವರು ಸಸ್ಯಾಹಾರಿಗಳಾಗಿರುವ ಮೂಲಕ ಸಹಕರಿಸಬೇಕು. ಸ್ವಾಮೀಜಿಯವರನ್ನು ಉಳಿಸಿಕೊಳ್ಳಲು ಇಚ್ಛಿಸುವವರು ಧರ್ಮ ಸಂಸದ್ ಕಾರ್ಯಾಲಯ(0820- 2524641), ಗಣೇಶ್ ಶೆಣೈ(9060526477), ಮನೋಹರ ತುಳಜಾ ರಾಮ್(9945363495) ಇವರನ್ನು ಸಂಪರ್ಕಿಸಬೇಕು.
ಅದೇ ರೀತಿ ನ.10ರಂದು ಅಪರಾಹ್ನ 12 ಗಂಟೆಗೆ ಕಲ್ಸಂಕ ರಾಯಲ್ ಗಾರ್ಡನ್ನಲ್ಲಿ ಧರ್ಮ ಸಂಸದ್ಗಾಗಿ ಚಪ್ಪರ ಮುಹೂರ್ತ ನಡೆಯಲಿದೆ ಎಂದು ಡಾ.ಪುರಾಣಿಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ಶರಣ್ ಪಂಪ್ವೆಲ್, ಸುನೀಲ್ ಕೆ. ಆರ್., ವಿಹಿಂಪ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಮನೋಹರ್ ತುಳಜಾ ರಾಮ್ ಉಪಸ್ಥಿತರಿದ್ದರು.