ಪಿಕಪ್‌- ರಿಕ್ಷಾ ಢಿಕ್ಕಿ: ಐದು ಮಂದಿಗೆ ಗಾಯ

Update: 2017-11-14 14:17 GMT

ಪುತ್ತೂರು, ನ. 14: ಪಿಕಪ್ ವಾಹನವೊಂದಕ್ಕೆ ಅಟೋ ರಿಕ್ಷಾವೊಂದು ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾ ಚಾಲಕ ಸಹಿತ ನಾಲ್ವರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ಪುತ್ತೂರು ನಗರದ ಹೊರವಲಯದ ಪಡೀಲು ಎಂಬಲ್ಲಿ  ಸಂಭವಿಸಿದೆ.

ರಿಕ್ಷಾ ಚಾಲಕ ಪುತ್ತೂರಿನ ಬೊಳುವಾರು ನಿವಾಸಿ ಶ್ರೀನಿವಾಸ್, ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಸಮೀಪದ ಹೊಸದುರ್ಗ ನಿವಾಸಿ ತನಿಯಪ್ಪ ನಾಯ್ಕ ಮತ್ತು ಅವರ ಪುತ್ರರಾದ ಹರೀಶ್ ಮತ್ತು ಸುರೇಶ್ ಗಾಯಗೊಂಡವರು. ಗಾಯಾಳುಗಳನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಪಿಕಪ್ ವಾಹನದ ಚಾಲಕ ಪಡೀಲು ಸಮೀಪ ನಡುರಸ್ತೆಯಲ್ಲಿ ಏಕಾಏಕಿಯಾಗಿ ಬ್ರೇಕ್ ಹಾಕಿದ ಪರಿಣಾಮವಾಗಿ ಹಿಂದಿನಿಂದ ಶ್ರೀನಿವಾಸ್ ಅವರು ಚಲಾಯಿಸಿಕೊಂಡು ಬರುತ್ತಿದ್ದ ರಿಕ್ಷಾ ಅದಕ್ಕೆ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News