×
Ad

ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗೋತ್ಸವ

Update: 2017-11-21 19:53 IST

ಬೆಳ್ತಂಗಡಿ, ನ. 21:  ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ಜನರಲ್ಲಿ ಅರಿವು, ಜಾಗೃತಿ ಮೂಡಿಸಲು ಕೇಂದ್ರ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರ ಭಾಗವಾಗಿ ಈಗಾಗಲೇ ಕೆಲವು ಸ್ಥಳಗಳಲ್ಲಿ ಯೋಗ ಗ್ರಾಮಗಳನ್ನು ರೂಪಿಸಿದ್ದು ಇದನ್ನು ದೇಶದೆಲ್ಲೆಡೆ ವಿಸ್ತರಿಸಲಾಗುವುದು ಎಂದು ಕೇಂದ್ರದ ಆಯುಷ್ ಇಲಾಖಾ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕೋ ಹೇಳಿದರು.

ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಂತಾರಾಷ್ಟ್ರೀಯ ಯೋಗೋತ್ಸವ ಮತ್ತು ಎರಡನೇ ಒಕ್ಕೂಟ ಯೋಗ ಕ್ರೀಡಾ ಕಪ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ದೇಶದೆಲ್ಲೆಡೆ ನೂರು ಯೋಗ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದ ಸಚಿವರು ಗೋವಾದಲ್ಲಿ ಸದ್ಯದಲ್ಲಿಯೇ ಹೊಸ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದ ಸಚಿವರು ಮಂಡ್ಯ ಜಿಲ್ಲೆಯ ನಾಗಮಂಗಲ, ಭುವನೇಶ್ವರ ಹಾಗೂ ಪಶ್ಚಿಮ ಬಂಗಾಲದಲ್ಲಿ ಹೊಸ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ. ಪೂನಾದಲ್ಲಿರುವ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿ ಅಲ್ಲಿ ಸಂಶೋಧನಾ ಕೇಂದ್ರವನ್ನೂ ಪ್ರಾರಂಭಿಸಲಾಗುವುದು. ಎಂದರು.

ಉಜಿರೆಯಲ್ಲಿರುವ ಎಸ್.ಡಿ.ಎಮ್. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ದೇಶದಲ್ಲಿಯೇ ಪ್ರಥಮ ಉತ್ಕೃಷ್ಠತಾ ಕಾಲೇಜು ಎಂದು ಆಯುಷ್ ಸಚಿವಾಲಯ ದಿಂದ ಮಾನ್ಯತೆ ನೀಡಲಾಗಿದೆ ಎಂದು ಸಚಿವರು ಪ್ರಕಟಿಸಿದರು.

ಯೋಗೋತ್ಸವವನ್ನು ಉದ್ಘಾಟಿಸಿದ ಆಸ್ಟ್ರೀಯಾದ ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜಿ ಮಾತನಾಡಿ ಯೋಗ ಎಂಬುದು ಧರ್ಮ ಅಲ್ಲ. ಅದು ಕಲೆಯೂ, ವಿಜ್ಞಾನವೂ ಆಗಿದೆ. ಯೋಗ ಮತ್ತು ಆಯುರ್ವೇದ ಅತ್ಯಂತ ಪುರಾತನವಾದುದು ನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ಪಡೆದು ನರನು ನಾರಾಯಣನಾಗಬಹುದು ಎಂದರು. 

ಯೋಗವೆಂಬುದು ಕೇವಲ ಆಸನಗಳಿಗೆ ಮಾತ್ರ ಸೀಮಿತಗೊಳಿಸಬಾರದು ಅದು ಶಿಸ್ತನ್ನು ಕಲಿಸುತ್ತದೆ ಮತ್ತು ಮನುಷ್ಯನನ್ನು ಎತ್ತರಕ್ಕೆ ಬೆಳೆಸುತ್ತದೆ. ಮನೆಯಲ್ಲಿ ತಾಯಿ-ತಂದೆ ಮಮತೆಯಿಂದ ನೀಡುವ ಶಿಕ್ಷಣ ಮತ್ತು ಸಂಸ್ಕಾರ ಶ್ರೇಷ್ಠವಾಗಿದೆ. ಸರಿಯಾಗಿ ತಿಳಿದುಕೊಂಡು ಯೋಗಾಭ್ಯಾಸ ಮಾಡಬೇಕು. ಸಸ್ಯಾಹಾರ ಸೇವನೆ ಮಾಡಬೇಕು. ಕೃಷಿಯೇ ಉತ್ತಮ ಸಂಸ್ಕೃತಿ. ಯೋಗದಿಂದ ನೈತಿಕವಾಗಿ ಆರೋಗ್ಯಪೂರ್ಣ ಸಮಾಜ ರೂಪುಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಆಧುನಿಕ ಜೀವನ ಶೈಲಿ ಮತ್ತು ತಂತ್ರಜ್ಞಾನಕ್ಕೆ ದಾಸರಾಗಿ ನಾವು ಆರೋಗ್ಯ ಭಾಗ್ಯವನ್ನು ಕಳೆದುಕೊಳ್ಳಬಾರದು. ಪಾಶ್ಚಾತ್ಯದ ಭೋಗ ಜಿವನಕ್ಕೆ ಬಲಿಯಾಗದೆ ಭಾರತದ ಯೋಗ ಜೀವನ ಮಾಡಬೇಕು. ವಿಶ್ವದೆಲ್ಲೆಡೆ ಈಗ ಯೋಗ, ಪ್ರಕೃತಿ ಚಿಕಿತ್ಸೆ ಮತ್ತು ಆಯುರ್ವೇದಕ್ಕೆ ಹೆಚ್ಚಿನ ಮಾನ್ಯತೆ ದೊರಕುತ್ತಿದೆ. ನಿತ್ಯವೂ ಯೋಗ, ಧ್ಯಾನ, ಪ್ರಾರ್ಥನೆ ಮಾಡುವುದರಿಂದ ಒತ್ತಡ ನಿವಾರಣೆಯಾಗಿ ಶಕ್ತಿ ವರ್ಧನೆಯೊಂದಿಗೆ ಶಾಂತಿಯಿಂದ ಆರೋಗ್ಯಪೂರ್ಣ ಜೀವನ ನಡೆಸಬಹುದು. ಯುವ ಜನತೆ ಆರೋಗ್ಯ ಭಾಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಧರ್ಮಸ್ಥಳದ ವತಿಯಿಂದ ಬೆಂಗಳೂರು ಮತ್ತು ದುಬಾನಲ್ಲಿ ಸದ್ಯದಲ್ಲಿಯೇ ಹೊಸ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಪ್ರಾರಂಭಿಸಲಾಗುವುದು ಎಂದು ಪ್ರಕಟಿಸಿದರು.
ಯೋಗ ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಅಗರ್‌ವಾಲ್ ಯೋಗೋತ್ಸವದ ಬಗ್ಗೆ ಮಾಹಿತಿ ನೀಡಿದರು.

ಹೇಮಾವತಿ ವಿ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಾ. ಪ್ರಶಾಂತ್ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು. ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೊೀಳ್ಪಾಡಿತ್ತಾಯ ಧನ್ಯವಾದವಿತ್ತರು.

ಯೋಗಪಟುಗಳು ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು. ಮೂರು ದಿನ ನಡೆಯುವ ಯೋಗೋತ್ಸವದಲ್ಲಿ ದೇಶ-ವಿದೇಶಗಳಿಂದ 500 ಮಂದಿ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. 

ಇಲ್ಲಿಗೆ ಬಂದ ಯೋಗಾಭ್ಯಾಸಿಗಳ ಸಾಧನೆಯನ್ನು ನೋಡಿದರೆ ಅವರಿಗೆ ಸರಿಯಾದ ತರಬೇತಿ ನೀಡಿ ಸಿದ್ದಗೊಳಿಸಿದರೆ ಮುಂದಿನ ಒಲಂಪಿಕ್‌ನಲ್ಲಿ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಖಂಡಿತ ಪಕಗೆಲ್ಲುವ ಸಾಧ್ಯತೆ ಇದೆ -ಡಾ, ಡಿ ವೀರೇಂದ್ರ ಹೆಗ್ಗಡೆಯವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News